https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಬಳ್ಳಾರಿ
ಯಾವುದೇ ಆಸೆ ಇಲ್ಲದೇ ದೇಶಕ್ಕಾಗಿ, ಜನರಿಗಾಗಿ ಕಷ್ಟಪಟ್ಟು ದುಡಿದು ಬೆಳೆ ಬೆಳೆಯುವ ರೈತರ ಸೇವೆ ಸ್ಮರಣೀಯವಾಗಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ಗಾದೆಪ್ಪ ಹೇಳಿದರು. ಕೃಷಿ ಇಲಾಖೆ ಆತ್ಮ ಯೋಜನೆ, ಕೃಷಿ ವಿಜ್ಞಾನ ಕೇಂದ್ರ ಹಗರಿ ಹಾಗೂ ಬಳ್ಳಾರಿ ತಾಲ್ಲೂಕು ಕೃಷಿಕ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ತಾಲ್ಲೂಕಿನ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಿಸಾನ್ ಗೋಷ್ಠಿ ಕಾರ್ಯಕ್ರಮ ಹಾಗೂ ರೈತ, ರೈತ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ರೈತಸ್ನೇಹಿ ಬಿಡಿಸಿಸಿ ಬ್ಯಾಂಕ್ಗೆ 12.53 ಕೋಟಿ ರೂ ಲಾಭ : ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಘೋಷಣೆ
ರೈತರ ನಿಸ್ವಾರ್ಥ ಸೇವೆ ಪರಿಗಣಿಸಿ ಅವರಿಗೆ ಗೌರವ ಸಮರ್ಪಣೆ ಮಾಡುವುದಕ್ಕಾಗಿ ರೈತರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಕೃಷಿ ಮಹಾವಿದ್ಯಾಲಯದ ಪಶು ವಿಜ್ಞಾನದ ಪ್ರಾಧ್ಯಾಪಕ ಡಾ.ರಮೇಶ್ ಮಾತನಾಡಿ, ರೈತರು ಸುಸ್ಥಿರ ಕೃಷಿ ಕಡೆ ಗಮನ ನೀಡಿ, ಹೆಚ್ಚಿನ ಇಳುವರಿ ಪಡೆಯುವ ಮೂಲಕ ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು. ಭೂಮಿ ಒಡಲನ್ನು ರಕ್ಷಿಸುವುದಕ್ಕಾಗಿ ನೈಸರ್ಗಿಕ ಕೃಷಿ ಮೇಲೆ ಅವಲಂಬಿತರಾಗಬೇಕು ಎಂದು ರೈತರಿಗೆ ತಿಳಿಸಿದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರವಿ ಮಾತನಾಡಿ, ಮಣ್ಣು ರೈತರ ಕಣ್ಣು. ಮಣ್ಣಿಂದಲೇ ಜಗದ ಉಗಮ. ಮಣ್ಣನ್ನು ನಾವು ಮುಂದಿನ ಪೀಳಿಗೆಯವರೆಗೂ ಕಾಪಾಡಬೇಕು. ಅತಿಯಾದ ರಾಸಾಯನಿಕ ಬಳಕೆಯನ್ನು ತಪ್ಪಿಸಿ ಸುಸ್ಥಿರ ಕೃಷಿಯೆಡೆಗೆ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು. ಬಳ್ಳಾರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಮಾತನಾಡಿ, ದೇಶ ಹಸಿವು ಮುಕ್ತ ಮಾಡುವಲ್ಲಿ ರೈತರ ಪಾತ್ರ ಬಹುಮುಖ್ಯವಾಗಿದೆ ಎಂದರು.
ತದನಂತರ ರೈತರೆಲ್ಲರೂ ಕೃಷಿ ವಿಜ್ಞಾನ ಕೇಂದ್ರ ಹಗರಿಯ ಕುಸುಬೆ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು. ಫ್ಯಾಕ್ಟ್ ಕಂಪನಿಯವರು ಡ್ರೋನ್ ಮೂಲಕ ನ್ಯಾನೋ ಯೂರಿಯಾವನ್ನು ಕುಸುಬೆ ಬೆಳೆಗೆ ಸಿಂಪಡಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು ಹಾಗೂ ಫ್ಯಾಕ್ಟ್ ಸೇಲ್ಸ್ ಮ್ಯಾನೇಜರ್ ರೇವಂತ್ ಮಣ್ಣು ಮಾದರಿ ಸಂಗ್ರಹಿಸುವ ವಿಧಾನ ತೋರಿಸಿಕೊಟ್ಟರು.
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲ್ಲೂಕು ಮಟ್ಟದಿಂದ 05 ರೈತ, ರೈತ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಕ್ಕಬೇವಿನಹಳ್ಳಿ ಗ್ರಾಮದ ಲಕ್ಷಿö್ಮಪುತ್ರಪ್ಪ, ಕುಂಬಳಪ್ಪ ತಂಬ್ರಳ್ಳಿ ಗ್ರಾಮ, ಕಾರೇಕಲ್ಲು ವೀರಾಪುರದ ರಾಜಶೇಖರ ರೆಡ್ಡಿ, ದಮ್ಮೂರು ಗ್ರಾಮದ ನಿರ್ಮಲ ಹಾಗೂ ಬಾದನಹಟ್ಟಿ ಗ್ರಾಮದ ಚಾನಾಳು ಕವಿತಾ ಇವರಿಗೆ ಸನ್ಮಾನಿಸಿ ಪ್ರಶಸ್ತಿಪತ್ರ ನೀಡಲಾಯಿತು.
ಹಗರಿಯ ಕೃಷಿ ಕಾಲೇಜಿನ ಪ್ರಭಾರ ಅಧಿಕಾರಿ ಡಾ. ರವಿಶಂಕರ್, ಕೃಷಿ ಅಧಿಕಾರಿ ಬಸವರಾಜ ಸಿಂಧಿಗೇರಿ, ಪ್ರಗತಿಪರ ರೈತರಾದ ಕಾರೇಕಲ್ಲು ವೀರಾಪುರದ ಭೋಗಾರೆಡ್ಡಿ, ಎತ್ತಿನ ಬೂದಿಹಾಳು ಗ್ರಾಮದ ಗಾಳೆಪ್ಪ, ದಮ್ಮೂರು ಗ್ರಾಮದ ನಿತೀಶ್, ಇಬ್ರಾಹಿಂಪುರದ ರವಿಕುಮಾರ್, ಕೃಷಿ ವಿಸ್ತರಣಾ ವಿಜ್ಞಾನಿ ಡಾ.ನವೀನ್, ಫ್ಯಾಕ್ಟ್ ಕಂಪನಿಯ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಪಳನಿಸ್ವಾಮಿ,
ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಗೋಡೆಹಾಳ್ ಸತ್ಯನಾರಾಯಣರೆಡ್ಡಿ, ಸಮಿತಿ ಖಜಾಂಚಿ ವೈ.ಲಿಂಗಾರಾಜು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವೈ.ಗಿರಿಗೋವಿಂದಪ್ಪ, ಕೆ.ರಾಮಣ್ಣ, ಎಸ್.ಸಮುದ್ರರಾಜ್, ವೈ.ಗೋಪಾಲರೆಡ್ಡಿ, ಕೃಷಿ ಅಧಿಕಾರಿಗಳಾದ ಜಂಬಣ್ಣ, ಜ್ಯೋತಿ, ಗಾಯಿತ್ರಿ, ಆತ್ಮ ಯೋಜನೆಯ ಸಿಬ್ಬಂದಿ ಕವಿತಾ ಕುಮಾರಿ, ವಾಣಿ ಕೋರಪ್ಪಳ, ಶಿಲ್ಪಾಭಾಗವಹಿಸಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್