https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಸಮಾಜದ ಸಾಂಸ್ಕೃತಿಕ ಬೇರುಗಳನ್ನು ಜೀವಂತವಾಗಿರಿಸುವುದು ಮತ್ತು ಯುವ ಪೀಳಿಗೆಗೆ ನಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಪರಿಚಯಿಸುವುದು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾದೇಶಿಕ ಕಲೆಗಳಿಗೆ ಹೊಸ ಚೈತನ್ಯ ನೀಡುತ್ತಿವೆ.
ಇದನ್ನೂ ಓದಿ: ಧ್ವನಿ ಬೆಳಕಿನಲ್ಲಿ ವಿಜಯನಗರ ವೈಭವ ಕಣ್ತುಂಬಿಕೊಳ್ಳಿ ಬನ್ನಿ : ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ

ಹೊಸಪೇಟೆ ನಗರದ ವಡಕರಾಯನ ದೇವಸ್ಥಾನದ ಹತ್ತಿರ ಹಮ್ಮಿಕೊಂಡಿದ್ದ ‘ವಿಜಯನಗರ ವಸಂತ ವೈಭವ’ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಗುರುವಾರ ಚಾಲನೆ ನೀಡಿದರು. ಹಂಪಿಯ ಸಾಂಸ್ಕೃತಿಕ ಹಿರಿಮೆ ಜಗತ್ತಿಗೆ ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.
ಮೆರವಣಿಗೆಯುದ್ದಕ್ಕೂ ಜಾನಪದ ಕಲೆಗಳ ಮಹಾಪೂರವೇ ಹರಿಯಿತು. ಆಕರ್ಷಕ ಡೊಳ್ಳು ಕುಣಿತ, ಕರಾವಳಿಯ ಭೂತಾರಾಧನೆ ವೇಷಗಳು, ವೈವಿಧ್ಯಮಯ ಲಂಬಾಣಿ ನೃತ್ಯ ಹಾಗೂ ಬಣ್ಣ ಬಣ್ಣದ ಗೊಂಬೆ ಆಟದ ಮೆರವಣಿಗೆ ನೆರೆದಿದ್ದವರ ಗಮನಸೆಳೆದವು. ಪೌರಾಣಿಕ ಹಿನ್ನೆಲೆಯ ಕಾಶಿಕಟ್ಟಯ್ಯ, ವಿವಿಧ ದೇವತೆಗಳ ವೇಷಗಳು ಮತ್ತು ರಕ್ಕಸರ ವೇಷಧಾರಿಗಳ ಪ್ರದರ್ಶನವು ಜನರ ಕುತೂಹಲವನ್ನು ಹೆಚ್ಚಿಸಿತು.
ವಿಶೇಷವಾಗಿ, ರಕ್ಕಸರ ವೇಷಧಾರಿಗಳು ಮೆರವಣಿಗೆಯುದ್ದಕ್ಕೂ ಮಕ್ಕಳನ್ನು ತಮಾಷೆಯಾಗಿ ಹೆದರಿಸುತ್ತಾ ರಂಜಿಸಿದರೆ, ಹಾಸ್ಯ ಗೊಂಬೆಗಳ ವೇಷಧಾರಿಗಳು ತಮ್ಮ ವಿಶಿಷ್ಟ ನಟನೆಯ ಮೂಲಕ ಜನರಿಗೆ ಕಚಗುಳಿ ಇಟ್ಟರು. ಸಾರ್ವಜನಿಕರು ಅಪರೂಪದ ಕಲಾತಂಡಗಳ ಜೊತೆ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಈ ಸಾಂಸ್ಕೃತಿಕ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಂಡರು. ವಿಜಯನಗರದ ಬೀದಿಗಳಲ್ಲಿ ಜಾನಪದ ಕಲೆಯ ವೈಭವ ಮೇಳೈಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.





More Stories
ಹಂಪಿ ಉತ್ಸವ: ನೀಲಿ ಬಾನಲ್ಲಿ ಪಟಗಳ ಪೈಪೋಟಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ
ಕಾಂಗ್ರೆಸ್ ಅಪಪ್ರಚಾರಕ್ಕೆ ಬಣವಿಕಲ್ ಕೆ. ನಾಗರಾಜ್ ಆಕ್ರೋಶ