September 20, 2026

Hampi times

Kannada News Portal from Vijayanagara

ವಿಡಿಯೋ ಕಾನ್ಫರೆನ್ಸ್ ಮೂಲಕ 20ನೇ ‘ರೋಜ್‌ಗಾರ್ ಮೇಳ’ ಯಶಸ್ವಿ ಆಯೋಜನೆ

https://youtu.be/NHc6OMSu0K4?si=SI_K4goOPEgwo6h2

ನವದೆಹಲಿ: 2047ರ ವೇಳೆಗೆ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡುವ ಬೃಹತ್ ಗುರಿಯಲ್ಲಿ ದೇಶದ ಯುವಜನತೆಯ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಸರ್ಕಾರಿ ವ್ಯವಸ್ಥೆಯಲ್ಲಿ ‘ನಾಗರಿಕ ದೇವೋ ಭವ’ ಎಂಬ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಲಾಗಿದ್ದ 20ನೇ ಆವೃತ್ತಿಯ ‘ರೋಜ್‌ಗಾರ್ ಮೇಳ’ದಲ್ಲಿ ದೇಶಾದ್ಯಂತ 51,000ಕ್ಕೂ ಹೆಚ್ಚು ನವ ನೇಮಕಾತಿ ಹೊಂದಿದ ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿ ಪ್ರಧಾನಿ ಮಾತನಾಡಿದರು. ಹಬ್ಬದ ಋತುಮಾನದ ಹೊಸ್ತಿಲಿನಲ್ಲಿ ಸಾವಿರಾರು ಕುಟುಂಬಗಳ ಕನಸು ನನಸಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಸರ್ಕಾರಿ ವ್ಯವಸ್ಥೆಗೆ ಬಂದ ನಂತರ ಪ್ರತಿಯೊಬ್ಬ ಅಧಿಕಾರಿಯೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಮತ್ತು ತಾವು ಅಥವಾ ತಮ್ಮ ಪೋಷಕರು ಹಿಂದೆ ಅನುಭವಿಸಿದ ಕಷ್ಟಗಳು ಸಾಮಾನ್ಯ ನಾಗರಿಕರಿಗೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

 

ಯುವಜನತೆಯನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದ ಪ್ರಧಾನಿ, ಪಿಎಂ-ಸೇತು ಯೋಜನೆಯಡಿ ₹60,000 ಕೋಟಿ ವೆಚ್ಚದಲ್ಲಿ ದೇಶದ 1,000 ಸರ್ಕಾರಿ ಐಟಿಐಗಳನ್ನು ಆಧುನೀಕರಿಸಲಾಗುತ್ತಿದೆ ಎಂದರು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಬೆಳೆದಿದ್ದು,

ಅರ್ಧಕ್ಕೂ ಹೆಚ್ಚು ನವೋದ್ಯಮಗಳು ಸಣ್ಣ ನಗರ ಹಾಗೂ ಪಟ್ಟಣಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಸುಮಾರು ₹1 ಲಕ್ಷ ಕೋಟಿ ಹೂಡಿಕೆಯ ‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ’ ಜಾರಿಗೆ ತರಲಾಗಿದ್ದು, ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಯುವಕರಿಗೆ ₹15,000 ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಭಾರತವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಜಿಡಿಪಿ ದರ ದಾಖಲಿಸಿ ಮುನ್ನುಗ್ಗುತ್ತಿದೆ ಎಂದು ಉಲ್ಲೇಖಿಸಿದ ಅವರು, ಸುಧಾರಣಾ ಪ್ರಕ್ರಿಯೆಗಳನ್ನು ಸರ್ಕಾರಿ ನೌಕರರು ನಿರಂತರವಾಗಿ ಮುಂದುವರಿಸಬೇಕು ಎಂದು ತಿಳಿಸಿದರು. ಸರ್ಕಾರಿ ಸೇವೆಗೆ ಸೇರಿದ ನೌಕರರು ನಿರಂತರವಾಗಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ‘ಐಜಿಒಟಿ ಕರ್ಮಯೋಗಿ’ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಸಲಹೆ ನೀಡಿದರು.

Please follow and like us:

 

 

Translate »