April 19, 2026

Hampi times

Kannada News Portal from Vijayanagara

ಸಿರಿ ಧಾನ್ಯ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಡಾ. ಸುರೇಶ ಇಟ್ನಾಳ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಕೊಪ್ಪಳ 
ಕೊಪ್ಪಳ ಜಿಲ್ಲೆ ಕೃಷಿ ಪ್ರಾಧಾನ್ಯತೆ ಹೊಂದಿರುವ ಜಿಲ್ಲೆಯಾಗಿದ್ದು, ರೈತರು ಸಿರಿ ಧಾನ್ಯ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಅವರು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ವಾಣಿಜ್ಯ ಮೇಳ 2026ರ ಅಂಗವಾಗಿ ಆಯೋಜಿಸಿದ್ದ ಸಿರಿಧಾನ್ಯ ಮೇಳ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯದ ಒಟ್ಟು ಗ್ರೀನ್ ಪ್ರಾಡಕ್ಟ್ನಲ್ಲಿ ಸುಮಾರು ಶೇ.10 ರಷ್ಟು ಕೊಪ್ಪಳ ಜಿಲ್ಲೆಯ ಪಾಲನ್ನು ನಾವು ಕಾಣುತ್ತವೆ. ನಮ್ಮ ಜಿಲ್ಲೆಯನ್ನು ಭತ್ತದ ಕಣಜ ಎಂದು ಸಹ ಕರೆಯಲಾಗುತ್ತದೆ. ಕೇವಲ ಭತ್ತಕ್ಕೆ ಮಾತ್ರ ಆದ್ಯತೆ ನೀಡದೆ ಸಿರಿ ಧಾನ್ಯ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು.
ಹಿಂದೆ ಯಾರು ಸಿರಿ ಧಾನ್ಯ ಬೆಳೆಯುತ್ತಾರೆ ಅವರು ಬಡವರು ಎನ್ನುವ ವಾಡಿಕೆ ಇತ್ತು. ಆದರೆ, ಈಗ ಒಂದು ಕೆ.ಜಿ ರಾಗಿ, ಬರಗ, ಹರಕ ಎಷ್ಟು ಬೆಲೆಯಿದೆ ಅನ್ನುವುದನ್ನ ನಾವು ಕಾಣಬಹುದು. ಸಿರಿಧಾನ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಫೈಬರ್ ಅಂಶ ದೊರೆಯುತ್ತೆ ಮತ್ತು ಇದರಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ.
ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಸಾವಿರ ಹೆಕ್ಟೇರ್ ಪ್ರದೇದಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದನ್ನು ಇನ್ನೂ ಹೆಚ್ಚಿಗೆ ಮಾಡಬೇಕಾಗುತ್ತದೆ. ಜತೆಗೆ ಸಾವಯವ ಕೃಷಿಗೆ ಹೆಚ್ಚಿನ ಆಸಕ್ತಿ ಕೊಡಬೇಕು ಎಂದು ತಿಳಿಸಿದರು.
ಪಿ.ಎಮ್.ಎಫ್.ಎಮ್.ಇ ಯೋಜನೆಯಲ್ಲಿ ಜೋಳದ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ರೈತರು ಕೇವಲ ಬೆಳೆಗಾರರಾಗಿ ಉಳಿಯದೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಯಶಸ್ವಿ ಉದ್ದಿಮೆದಾರರಾಗಲು ಈ ಯೋಜನೆಯು ಒಂದು ಪೂರಕ ಶಕ್ತಿಯಾಗಿದೆ.
ಜೋಳವನ್ನು ಸಂಸ್ಕರಿಸಿ, ಆಕರ್ಷಕ ಪ್ಯಾಕೇಜಿಂಗ್ ಮತ್ತು ಬ್ರಾಂಡಿಂಗ್ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪಿ.ಎಮ್.ಎಫ್.ಎಮ್.ಇ ಯೋಜನೆಯಡಿ ತಾಂತ್ರಿಕ ತರಬೇತಿ ಹಾಗೂ ಶೇ. 50 ರಷ್ಟು ಸಹಾಯಧನ ಲಭ್ಯವಿದ್ದು, ರೈತರು ಇದನ್ನು ಸದುಪಯೋಗಪಡಿಸಿಕೊಂಡರೆ ತಮ್ಮ ಅದಾಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸಬಹುದು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಡಿ ಕೃಷ್ಣಮೂರ್ತಿ ಅವರು ಮಾತನಾಡಿ, ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಇದೇ ತಿಂಗಳಲ್ಲಿ ಜಿಲ್ಲಾ ಮಟ್ಟದ ಕೃಷಿ ವಾಣಿಜ್ಯ ಮೇಳದೊಂದಿಗೆ ಆಯೋಜಿಸಲಾಗುತ್ತಿದ್ದು, ಈ ಮೂಲಕ ರೈತರು ಮತ್ತು ಸಾರ್ವಜನಿಕರಲ್ಲಿ ಬೆಳೆ ಉತ್ಪಾದನೆ ನಂತರ ಸಂಸ್ಕರಣೆ, ಮೌಲ್ಯವರ್ಧನೆ ಮೂಲಕ ಆದಾಯ ಹೆಚ್ಚಿಸುವ ಕ್ರಮಗಳು ಹಾಗೂ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿಧ್ಯಾಲಯದ ಮುಖ್ಯಸ್ಥರಾದ ಯೋಗಿನಿ ಅಕ್ಕನವರು ಮಾತನಾಡಿ ಸಿರಿಧಾನ್ಯಗಳಿಂದ ಆರೋಗ್ಯ ಸಂಪತ್ತು ಪಡೆದುಕೊಂಡು ಔಷಧಿಗಳಿಂದ ದೂರವಿರಿ ಎಂದು ಹೇಳಿದರು.
ಇಟಗಿಯ ಶ್ರೀ ಷ.ಬ್ರ.ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಿರಿಧಾನ್ಯಗಳನ್ನು ಸೇವಿಸುವುದರಿಂದ ಮನುಷ್ಯನ ಜೀವಿತಾವಧಿ ಹೆಚ್ಚಾಗಲಿದ್ದು, ಮಾರಣಾಂತಿಕ ಕಾಯಿಲೆಗಳಿಂದ ಮುಕ್ತರಾಗುತ್ತಾರೆ. ಹಾಗಾಗಿ ಎಲ್ಲರು ಹೆಚ್ಚಾಗಿ ಸಿರಿಧಾನ್ಯ ಪದಾರ್ಥಗಳನ್ನು ಬಳಸಲು ಆದ್ಯತೆ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಉಪ ಕೃಷಿ ನಿರ್ದೇಶಕ ಎಲ್.ಸಿದ್ದೇಶ್ವರ, ಕೃಷಿ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ವೀರಣ್ಣ ಕಮತರ್, ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ವಿಸ್ತರ್ಣ ಶಿಕ್ಷಣ ಕೇಂದ್ರದ ಅಧಿಕಾರಿಗಳು, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರು, ಪೊಲೀಸ್ ಸಿಬ್ಬಂದಿ ಹಾಗೂ ಕೃಷಿ ಇಲಾಖೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Please follow and like us:

 

 

 

 

 

Translate »
[t4b-ticker]
error: Content is protected !!