https://youtu.be/NHc6OMSu0K4?si=SI_K4goOPEgwo6h2

HAMPI TIMES
ಬೆಳಗಾವಿ ಸುವರ್ಣ ಸೌಧ: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿರುವ ಲೋಕೋಪಯೋಗಿ ಇಲಾಖೆಯ 330 ಕಿರಿಯ ಇಂಜಿನಿಯರ್ಗಳ ಅರ್ಹತಾ ಪಟ್ಟಿಯನ್ನು ಶೀಘ್ರ ಪ್ರಕಟಿಸಲು ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ವಿಧಾನಸಭೆಯ ಶೂನ್ಯವೇಳೆಯಲ್ಲಿಂದು ಶಾಸಕ ಎಸ್.ಸುರೇಶಕುಮಾರ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ,ಸಚಿವ ಸಿ.ಸಿ.ಪಾಟೀಲ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರುಗಳ ನೇಮಕಾತಿ ಪ್ರಕ್ರಿಯೆ ಕುರಿತು ಕಾನೂನು ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಯಾವುದೇ ಹಗರಣಗಳಿಗೆ ಅವಕಾಶವಾಗದಂತೆ ಎಚ್ಚರವಹಿಸಲಾಗಿದೆ. ಅರ್ಹತಾ ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸಿ, ಅರ್ಹರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಸದನಕ್ಕೆ ವಿವರಿಸಿದರು.
ಶಾಸಕ ಎಸ್.ಸುರೇಶಕುಮಾರ್ ಮಾತನಾಡಿ, 2019 ರಲ್ಲಿ ಲೋಕೋಪಯೋಗಿ ಕಿರಿಯ ಇಂಜಿನಿಯರುಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿತ್ತು, 2019 ರ ಜೂನ್ ತಿಂಗಳಲ್ಲಿ ಸಚಿವ ಸಂಪುಟವು ಅಧಿಸೂಚನೆಯನ್ನು ರದ್ದುಪಡಿಸಿತು. ನಂತರ ಪ್ರಕಟಿಸಿದ ಅಧಿಸೂಚನೆಯ ಪ್ರಕಾರ 2021 ರ ಜುಲೈ 30 ರಂದು ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆದು, 1:3 ರ ಅರ್ಹತೆಯ ಆಧಾರದಲ್ಲಿ ಅಭ್ಯರ್ಥಿಗಳ ಮೂಲದಾಖಲೆಗಳ ಪರಿಶೀಲನೆ ಕೂಡ ಮುಗಿದಿದೆ.ಆಯೋಗದ ಸದಸ್ಯರು ರೊಟೇಷನ್ ಆಧಾರದಲ್ಲಿ ಸಹಿ ಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದೇ ವಿಳಂಬಕ್ಕೆ ಕಾರಣವಾಗಿದೆ.ಆಯೋಗದ ನಿಧಾನಗತಿಯಿಂದಾಗಿ ಯುವ ಅಭ್ಯರ್ಥಿಗಳು ವ್ಯವಸ್ಥೆಗೆ ಪ್ರವೇಶಿಸುವ ಮುನ್ನವೇ ಸಿನಿಕರಾಗುತ್ತಿದ್ದಾರೆ ಹೀಗಾಗಲು ಅವಕಾಶ ನೀಡಬಾರದು ಎಂದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಸ್ವಾಯತ್ತ ಸಂಸ್ಥೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸರ್ಹತೆ ಹೆಚ್ಚಿಸುವ ಕಾರ್ಯಗಳಾಗಬೇಕು ಎಂದು ಸಲಹೆ ನೀಡಿದರು.



More Stories
ಬಳ್ಳಾರಿ ಲಿಡ್ಕರ್ ಎಂಪೋರಿಯಂನಲ್ಲಿ ಚರ್ಮವಸ್ತುಗಳ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ
ಕ್ರೀಡಾ ಜಗತ್ತಿಗೆ ಸ್ಫೂರ್ತಿ ಭಾರತದ ಮಹಿಳಾ ಆರ್ಚರಿ ಪಟು ಪಾಯಲ್ ನಾಗ್
ಬ್ರಿಡ್ಜ್ ಟು ಬೆಂಗಳೂರು’ ಮೂಲಕ ನವಶಕ್ತಿಯ ಅನಾವರಣ