https://youtu.be/NHc6OMSu0K4?si=SI_K4goOPEgwo6h2

ಚಿತ್ರದುರ್ಗ: ಪತ್ರಿಕೆ ಕೇವಲ ಹಾಳೆಯಲ್ಲ, ಅದು ಜಗತ್ತನ್ನು ನೋಡುವ ಕಿಟಕಿ. ಆಡಳಿತದ ತಪ್ಪುಗಳನ್ನು ಪ್ರಶ್ನಿಸುವುದು, ಅನ್ಯಾಯವನ್ನು ಬೆಳಕಿಗೆ ತರುವುದು ಮತ್ತು ಸಮಾಜದ ದಿಕ್ಕು ತಿದ್ದುವುದು ಪತ್ರಿಕೋದ್ಯಮದ ಮಹತ್ವದ ಕರ್ತವ್ಯ ಎಂದು ಹಿರಿಯ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಹೇಳಿದರು.
ಇದನ್ನೂ ಓದಿ: ಸಮಾಜ ಸುಧಾರಣೆಯ ಯುಗಪುರುಷ – ಸ್ವಾಮಿ ವಿವೇಕಾನಂದರು
ತಾಲ್ಲೂಕಿನ ದ್ವಾಮವ್ವನಹಳ್ಳಿಯಲ್ಲಿ ಡಾನ್ ಬೋಸ್ಕೋ ಪದವಿ ಕಾಲೇಜಿನ ರಾಷ್ಟ್ರಿಯ ಸೇವಾ ಯೋಜನೆಯಿಂದ ಸೋಮವಾರ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ದಿನಪತ್ರಿಕೆ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಿನಪತ್ರಿಕೆಗಳು ವಿಶ್ವದಾದ್ಯಂತ ನಡೆಯುವ ರಾಜಕೀಯ, ಆರ್ಥಿಕ, ಸಾಮಾಜಿಕ, ಕ್ರೀಡೆ ಹಾಗೂ ಮನರಂಜನಾ ಕ್ಷೇತ್ರಗಳ ಬೆಳವಣಿಗೆಗಳನ್ನು ಪ್ರತಿದಿನ ಓದುಗರ ಮುಂದಿಡುತ್ತವೆ ಎಂದರು.
ಪತ್ರಿಕೆ ಓದುವ ಅಭ್ಯಾಸ ವ್ಯಕ್ತಿಯ ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದಲ್ಲದೆ, ಸಮಾಜದಲ್ಲಿ ನಡೆಯುವ ಒಳ್ಳೆಯ ಹಾಗೂ ಕೆಟ್ಟ ಘಟನೆಗಳ ಅರಿವು ಮೂಡಿಸುತ್ತವೆ. ಸಮಾಜದಲ್ಲಿನ ಅನಿಷ್ಟಗಳನ್ನು ಎತ್ತಿ ತೋರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಬದಲಾವಣೆಗೆ ದಾರಿಯಾಗುವ ಕಾರ್ಯವನ್ನು ಪತ್ರಿಕಾರಂಗ ಮಾಡುತ್ತಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಂತರ ಪತ್ರಿಕಾರಂಗವನ್ನು ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಸರ್ಕಾರದ ಕಾರ್ಯವೈಖರಿಯನ್ನು ವಿಮರ್ಶಿಸುವುದು, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಮತ್ತು ಅಧಿಕಾರದಲ್ಲಿರುವವರಿಗೆ ಬಿಸಿ ಮುಟ್ಟಿಸುವ ಮೂಲಕ ಪತ್ರಿಕೆಗಳು ಜನಪರ ಕೆಲಸ ಮಾಡುತ್ತಿವೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪತ್ರಿಕೆಗಳು ಸಾಮಾನ್ಯ ಜ್ಞಾನ, ಸಮಕಾಲೀನ ಮಾಹಿತಿ ಹಾಗೂ ಸಮಾಜದ ಸಮಸ್ಯೆಗಳ ಅರಿವಿಗೆ ಪ್ರಮುಖ ಮೂಲವಾಗಿವೆ. ಪತ್ರಿಕೆಗಳು ಕೇವಲ ಸುದ್ದಿಗಳಿಗೆ ಸೀಮಿತವಾಗಿಲ್ಲ. ಕ್ರೀಡೆ, ಸಾಹಿತ್ಯ, ವ್ಯಂಗ್ಯಚಿತ್ರ, ವಿಶೇಷ ಪುರವಣಿಗೆಗಳು, ಮನರಂಜನೆ ಮತ್ತು ಚುಟುಕು ಬರಹಗಳ ಮೂಲಕ ಓದುಗರ ಬದುಕನ್ನು ಸಮೃದ್ಧಗೊಳಿಸುತ್ತವೆ.
ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆನ್ಲೈನ್ ಪತ್ರಿಕೆಗಳನ್ನೂ ಪ್ರತಿದಿನ ಕನಿಷ್ಠ ಹತ್ತು ನಿಮಿಷ ಓದಿದರೆ ಭವಿಷ್ಯ ಉಜ್ವಲವಾಗುತ್ತದೆ ಹಾಗೂ ಬದುಕು ಹಸನಾಗುತ್ತದೆ. ವಾಚಕರು ತಮ್ಮ ಅಭಿಪ್ರಾಯಗಳನ್ನು ‘ವಾಚಕರ ವಾಣಿ’ ಮೂಲಕ ಪತ್ರಿಕೆಗಳಿಗೆ ಕಳುಹಿಸಿದರೆ ಸರ್ಕಾರದ ಗಮನಕ್ಕೂ ಸಮಸ್ಯೆಗಳು ತಲುಪುತ್ತವೆ. ಎಲ್ಲರೂ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡರೆ ಜ್ಞಾನ ವಿಸ್ತಾರವಾಗುತ್ತದೆ, ಸಮಾಜದ ಬಗ್ಗೆ ಜಾಗೃತಿ ಹೆಚ್ಚುತ್ತದೆ ಮತ್ತು ಬದುಕು ಹಸನಾಗುತ್ತದೆ.
ವಿದ್ಯಾರ್ಥಿಗಳ ಜೀವನದಲ್ಲಿ ಎನ್ಎಸ್ಎಸ್ ಸೇವಾ ಚಟುವಟಿಕೆಗಳು ತಾಳ್ಮೆ, ಶಿಸ್ತು ಮತ್ತು ಸೇವಾ ಗುಣಗಳನ್ನು ಬೆಳೆಸುತ್ತವೆ. ಸ್ವಚ್ಛತಾ ಸೇವೆ, ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿತನ ಮೂಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬಂದಿರುವ ಪ್ರತಿಯೊಬ್ಬರೂ ಸಮಾಜದ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳಬೇಕು.
ಮಾದಾರ ಚನ್ನಯ್ಯ ಗುರುಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ರಾಘವೇಂದ್ರ ಮಾತನಾಡಿ, ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ದಿನಪತ್ರಿಕೆ ಓದುವ ಅಭ್ಯಾಸದ ಅಗತ್ಯತೆ ಇನ್ನಷ್ಟು ಹೆಚ್ಚಾಗಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ಪತ್ರಿಕೆ ಓದುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ವಿಸ್ತಾರವಾಗುವುದರ ಜೊತೆಗೆ ತಾಳ್ಮೆ, ಚಿಂತನಾ ಶಕ್ತಿ ಮತ್ತು ದೇಶದ ಹಿತಾಸಕ್ತಿಯ ಅರಿವು ವೃದ್ಧಿಯಾಗುತ್ತದೆ ಎಂದರು.
ಪುಸ್ತಕ ಹಾಗೂ ಪತ್ರಿಕೆಗಳು ಜೀವನದ ಮೊದಲ ಪಾಠ. ಪ್ರಾರಂಭದಿAದಲೇ ಓದುವ ಅಭ್ಯಾಸ ರೂಢಿಸಿಕೊಂಡರೆ ವ್ಯಕ್ತಿತ್ವ ವಿಕಾಸಕ್ಕೆ ಬಲ ಸಿಗುತ್ತದೆ. ಮಾಹಿತಿ ಅಂಗೈಯಲ್ಲೇ ಸಿಗುವ ಕಾಲದಲ್ಲಿಯೂ ಪತ್ರಿಕೆ ಓದಿನ ಮಹತ್ವ ಕಡಿಮೆಯಾಗಬಾರದು. ಗ್ರಾಮೀಣ ಜನರ ಬದುಕಿನ ನೈಜ ಚಿತ್ರಣವನ್ನು ಹತ್ತಿರದಿಂದ ಅರಿಯುವ ಅವಕಾಶ ಶಿಬಿರಗಳ ಮೂಲಕ ಸಿಗುತ್ತದೆ.
ಒಂದಾಗಿ ಜೀವನ ಸಾಗಿಸುವುದು, ಪರಸ್ಪರ ಸಹಕಾರದ ಮನೋಭಾವ ಬೆಳೆಸಿಕೊಳ್ಳುವುದು ಮತ್ತು ಸಮಾಜಮುಖಿ ಚಿಂತನೆ ರೂಪಿಸಿಕೊಳ್ಳುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಲು ಇವು ನೆರವಾಗುತ್ತವೆ ಎಂದರು. ಹಿರಿಯ ಪತ್ರಕರ್ತ ವೀರೇಂದ್ರ ಕೋಗುಂಡೆ ಮಠ, ಎನ್ಎಸ್ಎಸ್ ನೋಡಲ್ ಅಧಿಕಾರಿ ಡಾ.ಎನ್.ಧನಕೋಟಿ, ಸಹ ಶಿಬಿರಾಧಿಕಾರಿಗಳಾದ ರಿಂಕಿ ಸುರೇಶ್, ಫೂಬಾಲನ್ ಇದ್ದರು.



More Stories
ಜಗ ಮೆಚ್ಚಿದ ಪೊಲೀಸ್
ಸಮಾಜ ಸೇವೆಯೇ ನಿಜವಾದ ಭಕ್ತಿ: ಪ್ರಧಾನಿ ಮೋದಿ
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ