April 11, 2026

Hampi times

Kannada News Portal from Vijayanagara

ಭಾರತದ ಅಪ್ರತಿಮ ವೀರಸೇನಾನಿ ಮನೇಕ್ ಷಾ

https://youtu.be/NHc6OMSu0K4?si=SI_K4goOPEgwo6h2

ಅದ್ವಿತೀಯ ನಾಯಕ ಎಂದು ಅವರನ್ನು ಕರೆಯಲು ಅವರ ಮಿಲಿಟರಿ ಜೀವನದ ಕೆಲವು ಘಟನೆಗಳು ಕಾರಣವಾಗಿವೆ. ತಮ್ಮ ಸೈನಿಕರಲ್ಲಿ ಅತ್ಯುತ್ಸಾಹವನ್ನು ತುಂಬುತ್ತಿದ್ದ ಮತ್ತು ಹುರಿದುಂಬಿಸುತ್ತಿದ್ದ ಹಾಗೂ ಆ ಕಾರಣಕ್ಕಾಗಿಯೇ ತಮ್ಮ ಸೈನಿಕರಿಂದ ಸ್ಯಾಮ್ ಬಹದ್ದೂರ್ ಎಂದು ಕರೆಸಿಕೊಂಡಿದ್ದ, ತಮ್ಮ ನೇರ ಹಾಗೂ ನಿಷ್ಠುರ ನಡೆ-ನುಡಿಗಳಿಂದ ಆದರೆ ಅಷ್ಟೇ ಲವಲವಿಕೆಯ ಬದುಕಿನಿಂದ, ಅಗಾಧ ದೇಶ ಪ್ರೇಮದ ಜೊತೆಗೆ ಸಮಯ ಪ್ರಜ್ಞೆ ಹಾಗೂ ವಿಚಕ್ಷಣ ಜಾಣ್ಮೆಗೆ ಹೆಸರಾಗಿದ್ದವರು ಫೀಲ್ಡ್ ಮಾರ್ಷಲ್ ಮನೆಕ್ ಷಾ.

ಅದು ೧೯೭೧ರ ಸಮಯ. ಐರನ್ ಲೇಡಿ ಎಂದೇ ಹೆಸರಾಗಿದ್ದ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರು ಅಂದಿನ ನಮ್ಮ ಭಾರತೀಯ ಸೇನೆಯ ಮಹಾದಂಡನಾಯಕರಾಗಿದ್ದ ಸ್ಯಾಮ್ ಮನೇಕ್ ಷಾ ಅವರನ್ನು ಯುದ್ಧ ಮಾಡಲು ನಮ್ಮ ಸೈನ್ಯ ತಯಾರಿದೆಯೇ? ನಾವು ಯುದ್ಧ ಮಾಡಬಹುದೇ? ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಸ್ಯಾಮ್ ನಾನು ಹಾಗೂ ನನ್ನ ಸೈನ್ಯ ಯಾವಾಗಲೂ ತಯಾರಿರುವೆವು ಸ್ವೀಟಿ ಎಂದು ಹೇಳಿದ್ದರು. ಓರ್ವ ಪ್ರಧಾನಮಂತ್ರಿಗೆ ಈ ರೀತಿ ಹೇಳುವಷ್ಟು ದಿಟ್ಟತನ ಹಾಗೂ ವಯೋ ಸಹಜ ಸಲುಗೆಗಳು ಅವರಿಗೆ ಮೈಗೂಡಿದ್ದವು.

೧೯೭೧ರ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಯುದ್ಧದಲ್ಲಿ ಫೀಲ್ಡ್ ಮಾರ್ಷಲ್ ಮನೆಕ್ ಷಾ ಆರ್ಮಿ ಸ್ಟಾಕ್ ನ ಮುಖ್ಯಸ್ಥರಾಗಿದ್ದರು. ಸರಿ ಸುಮಾರು ೪೦ ವರ್ಷಗಳ ವೃತ್ತಿ ಜೀವನವನ್ನು ನಡೆಸಿದ ಅವರು ಸುಮಾರು ಐದು ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ೨೦೦೮ರ ಜೂನ್ ೨೭ರಂದು ಅವರು ಮರಣ ಹೊಂದಿದರು.

ಒಂದೊಮ್ಮೆ ಪ್ರಧಾನಿಯಾದ ಶ್ರೀಮತಿ ಇಂದಿರಾ ಗಾಂಧಿ ಅವರು ಮನೆಕ್ ಷಾ ಅವರ ಜನಪ್ರಿಯತೆಯನ್ನು ನೋಡಿ ನೀವು ನನ್ನ ಸರ್ಕಾರದ ವಿರುದ್ಧ ದಂಗೆ ಏಳುತ್ತಿರುವರೇ ಎಂದು ಪ್ರಶ್ನಿಸಿದಾಗ ಅತ್ಯಂತ ಪ್ರಾಮಾಣಿಕವಾಗಿ ಮನೆಕ್ ಷಾ ನನಗೆ ನಿಜವಾಗಿಯೂ ರಾಜಕೀಯದಲ್ಲಿ ಆಸಕ್ತಿ ಹಾಗೂ ಮಹತ್ವಕಾಂಕ್ಷೆ ಎರಡೂ ಇಲ್ಲ. ನನ್ನ ಕೆಲಸ ನನ್ನ ಸೈನ್ಯದ ಜವಾಬ್ದಾರಿ ನಿಮ್ಮ ಕೆಲಸ ನಿಮ್ಮ ಸರ್ಕಾರವನ್ನು ನಡೆಸುವುದು ನಾನು ನನ್ನ ಕೆಲಸವನ್ನು ಮಾತ್ರ ಮಾಡುತ್ತೇನೆ ಹಾಗೂ ನೀವು ನಿಮ್ಮ ಕೆಲಸವನ್ನು ನೋಡಿಕೊಳ್ಳಿ ಎಂದು ಅತ್ತಂತ ಸ್ಪಷ್ಟವಾಗಿ ಉತ್ತರಿಸಿದ್ದರು.

ಮನೆಕ್ ಷಾ ಅವರು ಗೂರ್ಖ ಸಿಪಾಯಿಗಳ ಮೇಲೆ ತುಸು ಹೆಚ್ಚಿನ ಅಭಿಮಾನವನ್ನೇ ಹೊಂದಿದ್ದರು. ತಮ್ಮ ಮಿಲಿಟರಿ ಟ್ರೂಪ್‌ಗಳನ್ನು ಗ್ಯಾಲೆಂಟರಿ ಕಾರ್ಯಕ್ರಮಗಳಿಗೆ ಅವರು ನಿರ್ದೇಶಿಸುವಾಗ ಒಮ್ಮೆ ಹೀಗೆ ಹೇಳಿದ್ದರು . ಯಾರಾದರೂ ನಾನು ಸಾವಿಗೆ ಭಯ ಪಡುವುದಿಲ್ಲ ಎಂದರೆ ಒಂದೋ ಆತ ಸುಳ್ಳು ಹೇಳುತ್ತಿರಬಹುದು ಇಲ್ಲವೇ ಆತ ಗೂರ್ಖಾ ಸಿಪಾಯಿ ಆಗಿರಬಹುದು ಎಂದು…. ಇದು ಗೂರ್ಖಾ ರೆಜಿಮೆಂಟ್ನ ಕುರಿತ ಅವರ ಹೆಮ್ಮೆಯ ಮಾತಾಗಿತ್ತು

೧೯೪೨ರ ಎರಡನೆಯ ಮಹಾ ಯುದ್ಧದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ ಅವರು ಜಪಾನೀಯರ ವಿರುದ್ಧ ಬರ್ಮಾದಲ್ಲಿ ಕಾರ್ಯಾ ಚರಣೆ ನಡೆಸಿದರು. ಆ ಸಮಯದಲ್ಲಿ ಅವರ ಎದೆಗೆ ಸರಿ ಸುಮಾರು ಏಳು ಗುಂಡುಗಳು ಬಿದ್ದಿದ್ದು ಯಾವುದೇ ಕ್ಷಣದಲ್ಲಿಯೂ ಸಹ ಸಾವು ಅವರನ್ನು ಸಮೀಪಿಸುವಂತಿತ್ತು…

ಆದರೆ ಅವರ ಗಟ್ಟಿ ಗುಂಡಿಗೆಯ ಮುಂದೆ ಸಾವು ಕೂಡ ಹಿಂದೇಟು ಹಾಕಿತ್ತು ಅವರ ಲಿವರ್, ಲಂಗ್ಸ್ ಹಾಗೂ ಕಿಡ್ನಿಗಳನ್ನು ಘಾಸಿಗೊಳಿಸಿ ಪ್ರಾಣಕ್ಕೆ ಎರವಾಗುವಂತಹ ಸ್ಥಿತಿಯಲ್ಲಿ ವೈದ್ಯರು ಅವರನ್ನು ಚಿಕಿತ್ಸೆಗೊಳಪಡಿಸಿದ ನಂತರ ಏನಾಯಿತು ಎಂದು ಕೇಳಲು ಹೇಸರಗತ್ತೆಯೊಂದು ನನ್ನನ್ನು ಒದೆಯಿತು ಎಂದು ತಮಾಷೆಯಿಂದ ಹೇಳಿದ್ದರು ಸ್ಯಾಮ್…. ಅದು ಅವರ ಸೆನ್ಸ್ ಆಫ್ ಹ್ಯೂಮರ್.

 

೧೯೪೮ರಲ್ಲಿ ಅವರು ಅಂದಿನ ರಕ್ಷಣಾ ಸಚಿವ ವಿಪಿ ಮೆನನ್ ಅವರೊಂದಿಗೆ ಕಾಶ್ಮೀರದ ಮಹಾರಾಜರಾದ ಹರಿ ಸಿಂಗ್ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಶ್ರೀನಗರಕ್ಕೆ ಹೊರಟರು. ಮಹಾರಾಜ ಹರಿಸಿಂಗ್ ಅವರು ಅದೆಷ್ಟೇ ಉದ್ಧಟತನದಿಂದ ಅಸಹನೆಯಿಂದ ಮಾತನಾಡಿದರೂ ಕೂಡ ತಮ್ಮದೇ ಆದ ರೀತಿಯಲ್ಲಿ ಅವರನ್ನು ಸಮಾಧಾನಪಡಿಸಿ ಅಲ್ಲಿಂದ ಸುರಕ್ಷಿತವಾಗಿ ಮರಳಿ ಕರೆ ತಂದರು ಮನೆಕ್ ಷಾ.

೧೯೬೨ರ ಯುದ್ಧದಲ್ಲಿ ಚೀನಾದಿಂದ ಸೋಲನ್ನುಂಡ ಭಾರತ ದೇಶದ ಅಧಿಕಾರಿ ಬಿ ಎಮ್ ಕೌಲ್ ಅವರ ಫೋರ್ ಕಾರ್ಪ್ಸ್ ನ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಮಯದಲ್ಲಿ ತಮ್ಮ ಸೈನ್ಯದ ತುಕಡಿಗೆ ಇನ್ನು ಮುಂದೆ ನೀವಾರೂ ಮೇಲಿನವರಿಂದ ಮೌಖಿಕ ಇಲ್ಲವೇ ಹಸ್ತಾಕ್ಷರದಲ್ಲಿ ಬರೆದ ಆದೇಶ ಪತ್ರವಿಲ್ಲದೆ ದಾಳಿಗೆ ಮುಂದಾಗಬೇಡಿ ಎಂದು ನಿರ್ದೇಶಿಸಿದ್ದರು. ಪ್ರಧಾನಿ ನೆಹರು ಹಾಗೂ ರಕ್ಷಣಾ ಸಚಿವರಾದ ವೈ ಬಿ ಚೌಹಾನ್ ಅವರು ವಾರ ಫ್ರಾಂಟಿಯರಗೆ ಭೇಟಿ ನೀಡಿದಾಗ ನೆಹರು ಅವರ ಪುತ್ರಿ ಇಂದಿರಾಗಾಂಧಿಯವರು ಕೂಡ ಅವರೊಂದಿಗಿದ್ದರು.

ಆ ಸಮಯ ದಲ್ಲಿ ಮನೇಕ್ ಷಾ ಅವರು ಅತ್ಯಂತ ಸಹಜವಾಗಿ ತಮ್ಮ ತಂದೆಯ ಹಿಂದೆ ಮಿಲಿಟರಿಯ ರೆಕಾರ್ಡ್ ರೂಮ್ ಒಳಗೆ ಇಂದಿರಾಗಾಂಧಿ ಕಾಲಿರಿಸಲು ಪ್ರಯತ್ನಿಸಿದಾಗ ನೀವು ರಹಸ್ಯವನ್ನು ಕಾಯ್ದುಕೊಳ್ಳುವ ಪ್ರಮಾಣವನ್ನು ಮಾಡಿಲ್ಲದ ಕಾರಣ ನೀವು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅತ್ಯಂತ ಸರಳವಾಗಿ ಆದರೆ ಅಷ್ಟೇ ದೃಢವಾಗಿ ಹೇಳಿ ಅವರಿಗೆ ಪ್ರವೇಶ ನಿರಾಕರಿಸಿದರು.

ಸಾರ್ವಜನಿಕವಾಗಿ ತಮ್ಮ ಜನಪ್ರಿಯತೆಯನ್ನು ಅರಿತಿದ್ದರೂ ಕೂಡ ಮನೆಯಲ್ಲಿ ಅಷ್ಟೇ ಅನೌಪಚಾರಿಕವಾದ ಬದುಕು ಅವರದಾಗಿತ್ತು. ಈ ಕುರಿತು (ಬ್ರಿಟಿಷ್ ಬ್ರಾಡ್ಕಾಸ್ಟಿಂಗ್) ಬಿಬಿಸಿ ಗೆ ಮಾತನಾಡಿದ ಅವರ ಪುತ್ರಿ ಮಾಯ ದಾರುವಾಲ ಅವರು ನನ್ನಪ್ಪ ಸ್ಯಾಮ್ ಅತಿ ದೊಡ್ಡ ಮೀಸೆಗಳನ್ನು ಹೊಂದಿದ್ದು ಮನೆಯಲ್ಲೂ ಕೂಡ ಅಷ್ಟೇ ದರ್ಪ ಮತ್ತು ಅಧಿಕಾರದಿಂದ ನಡೆದುಕೊಳ್ಳುತ್ತಾರೆ ಎಂದು ಜನರು ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ. ಅತ್ಯಂತ ಸರಳವಾದ ಮಗುವಿನಂತಹ ವ್ಯಕ್ತಿತ್ವ ಆತನದ್ದು.

ಮಕ್ಕಳೊಂದಿಗೆ ಮಗುವಾಗುವ, ತಮಾಷೆ ಮಾಡುವ, ಕಾಲೆಳೆಯುವ, ಕಿರಿಕಿರಿ ಮಾಡುವ ವ್ಯಕ್ತಿ ಅವರಾಗಿದ್ದರು ಎಷ್ಟೋ ಬಾರಿ ನಾವು ಅಪ್ಪ ಸಾಕು ನಿಲ್ಲಿಸಿ ಎಂದು ಹೇಳುತ್ತಿದ್ದೆವು ಎಂದು ಹೇಳಿದ್ದಾರೆ. ಮನೆಯಲ್ಲಿ ಬೇರೆಯವರ ಕೋಣೆಯನ್ನು ಅಪ್ಪ ಪ್ರವೇಶಿಸಿದ್ದಾರೆ ಎಂದರೆ ಈಗೇನು ಮಾಡಬಹುದು ಎಂಬ ಕುತೂಹಲ ನಮಗೆ ಸದಾ ಇರುತ್ತಿತ್ತು ಎಂದು ಮಾಯ ಹೇಳಿದ್ದರು.

೧೯೭೧ರ ಯುದ್ಧದಲ್ಲಿ ಇಂದಿರಾ ಗಾಂಧಿಯವರು ಪಾಕಿಸ್ತಾನದ ಮೇಲೆ ಮಾರ್ಚ್ ತಿಂಗಳಿನಲ್ಲಿಯೇ ದಾಳಿ ಮಾಡುವ ಕುರಿತು ಮಾತನಾಡಿದಾಗ ಅದನ್ನು ತಿರಸ್ಕರಿಸಿದ ಮನೆಕ್ ಷಾ ಅವರು ನನ್ನ ಸೈನ್ಯ ಇದಕ್ಕೆ ತಯಾರಾಗಿಲ್ಲ… ನೀವು ಯುದ್ಧವನ್ನು ಗೆಲ್ಲಲೇ ಬೇಕು ಎಂದಿದ್ದರೆ ನನಗೆ ಆರು ತಿಂಗಳುಗಳ ಕಾಲ ಸಮಯಾವಕಾಶ ಕೊಡಿ ನಾನು ಖಂಡಿತವಾಗಿಯೂ ಯುದ್ಧದಲ್ಲಿ ನಿಮಗೆ ಗೆಲುವನ್ನು ತಂದುಕೊಡುತ್ತೇನೆ ಎಂದು ಅತ್ಯಂತ ದಿಟ್ಟವಾಗಿ ಪ್ರಧಾನಿಯವರಿಗೆ ಹೇಳಿದ್ದರು. ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಧಾನಿ ಇಂದಿರಾ ಗಾಂಧಿ ಕೂಡ ಅವರ ಮಾತಿಗೆ ಮನ್ನಣೆ ನೀಡಲು ಕಾರಣ ಅವರ ನೇರ, ನಿಷ್ಠುರ ಹಾಗೂ ಪ್ರಾಮಾಣಿಕ ನಡೆನುಡಿಗಳಾಗಿದ್ದವು ಎಂದರೆ ತಪ್ಪಿಲ್ಲ.

ದೇಶದ ಮಿಲಿಟರಿ ಇತಿಹಾಸದಲ್ಲಿ ೧೯೭೧ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನವನ್ನು ಎರಡು ಹೋಳಾಗಿಸಿ ಬಾಂಗ್ಲಾದೇಶವನ್ನು ಹುಟ್ಟುಹಾಕುವಲ್ಲಿ ಮನೆಕ್ ಷಾ ಅವರ ಅದ್ಭುತವಾದ ಕಾರ್ಯತಂತ್ರ ಗೆಲುವಿಗೆ ಕಾರಣವಾಯಿತು. ಭಾರತ ದೇಶ ಕಂಡ ಅತ್ಯಂತ ಧೀಮಂತ ವೀರಯೋಧ, ಐದು ನಕ್ಷತ್ರಗಳನ್ನು ತಮ್ಮ ಹೆಗಲಿಗೆರಿಸಿಕೊಂಡ ಭಾರತ ದೇಶದ ಪ್ರಥಮ ಫೀಲ್ಡ್ ಮಾರ್ಷಲ್ ಮನೆಕ್ ಷಾ ಅಜರಾಮರರು. ಅವರಿಗೊಂದು ದಿವ್ಯವಾದ ಗೌರವಪೂರ್ವಕವಾದ ಸಲ್ಯೂಟ್

Please follow and like us:

 

 

 

 

 

Translate »
[t4b-ticker]
error: Content is protected !!