April 11, 2026

Hampi times

Kannada News Portal from Vijayanagara

ಸ್ವಾವಲಂಬಿ ಬದುಕು ಕಲಿಸಿದ ಅಪ್ಪ

https://youtu.be/NHc6OMSu0K4?si=SI_K4goOPEgwo6h2

ಕನಕನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ರಾಜಬಾಬು ಎಂಬ ಮುಖ್ಯಸ್ಥ ಇದ್ದನು. ಆತ ಹೆಂಡತಿ ಹಾಗೂ ಮಗಳ ಜೊತೆ ವಾಸವಾಗಿದ್ದನು. ಮನೆಯಲ್ಲಿ ಅನೇಕ ಜನ ಕೆಲಸಗಾರರು ಇದ್ದರು. ಅದರಲ್ಲಿ ರಂಗಣ್ಣನೂ ಒಬ್ಬ. ರಂಗಣ್ಣನು ಬಡ ವ್ಯಕ್ತಿಯಾಗಿದ್ದನು. ರಂಗಣ್ಣನಿಗೆ ಹೆಂಡತಿ ಹಾಗೂ ಮಗಳಿದ್ದಳು. ರಂಗಣ್ಣನು ರಾಜಬಾಬು ಅವರಿಗೆ ನಂಬಿಕೆಯ ವ್ಯಕ್ತಿಯಾಗಿದ್ದನು; ಅಷ್ಟೇ ಅಲ್ಲದೆ, ಒಳ್ಳೆಯ ಮನಸ್ಸಿನ ನಿಸ್ವಾರ್ಥ ವ್ಯಕ್ತಿಯೂ ಆಗಿದ್ದನು.

ರಂಗಣ್ಣನು ರಾಜಬಾಬು ಬಳಿ ನಿಯತ್ತಿನಿಂದ ಕೆಲಸ ಮಾಡಿ ಹಣ ಪಡೆಯುತ್ತಿದ್ದನು. ರಾಜಬಾಬು ಹೆಚ್ಚಿನ ಹಣ ತೆಗೆದುಕೊಳ್ಳಲು ಒತ್ತಾಯಿಸಿದರೂ ಅದನ್ನು ಸ್ವೀಕರಿಸುತ್ತಿರಲಿಲ್ಲ. ರಂಗಣ್ಣನಿಗೆ ತನ್ನ ಮಗಳನ್ನು ಓದಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಮಾಡುವ ಆಸೆ ಇತ್ತು. ಅದಕ್ಕಾಗಿ ಆತ ರಾಜಬಾಬು ಮನೆಯಲ್ಲಿ ಹೆಚ್ಚಿನ ಕೆಲಸ ಮಾಡಿ ಹೆಚ್ಚಿನ ಹಣ ಪಡೆಯುತ್ತಿದ್ದನು. ರಾಜಬಾಬು ಮಗಳು ಸೇರಿದ್ದ ಶಾಲೆಯಲ್ಲಿಯೇ ತನ್ನ ಮಗಳನ್ನೂ ಓದಲು ಸೇರಿಸಿದ್ದನು.

ರಾಜಬಾಬು ಮಗಳಾದ ರಶ್ಮಿ ಬಹಳ ಅಹಂಕಾರಿಯಾಗಿದ್ದಳು. ರಂಗಣ್ಣನ ಮಗಳಾದ ಚಿನ್ನುಳನ್ನು ಸ್ನೇಹಿತರ ಮುಂದೆ ಹೀಯಾಳಿಸುತ್ತಿದ್ದಳು. ಆದರೆ ಚಿನ್ನು ಬಹಳ ಗುಣವಂತೆ ಹಾಗೂ ಒಳ್ಳೆಯ ಮನಸ್ಸಿನ ಹುಡುಗಿಯಾಗಿದ್ದಳು. ಯಾರ ಮನಸ್ಸನ್ನೂ ನೋಯಿಸಲು ಇಚ್ಛಿಸುತ್ತಿರಲಿಲ್ಲ.
ಒಂದು ದಿನ ಫಲಿತಾಂಶ ಬಂದಿತು. ಅದರಲ್ಲಿ ರಶ್ಮಿ ಶೇ. ೬೦ರಷ್ಟು ಅಂಕ ಹಾಗೂ ಚಿನ್ನು ಶೇ. ೯೦ರಷ್ಟು ಅಂಕ ಗಳಿಸಿದ್ದರು. ರಾಜಬಾಬು ತನ್ನ ಮಗಳನ್ನು ತುಂಬಾ ಮುದ್ದು ಮಾಡುತ್ತಿದ್ದನು. ಆದಕಾರಣ ಅವನು “ಮುಂದಿನ ಪರೀಕ್ಷೆಯನ್ನು ಚೆನ್ನಾಗಿ ಮಾಡು ಮಗಳೇ” ಎಂದು ಪ್ರೋತ್ಸಾಹಿಸಿದನು.

 

ರಂಗಣ್ಣನ ಮಗಳ ಅಂಕವನ್ನು ನೋಡಿದ ರಾಜಬಾಬು ಅವಳಿಗೆ ಶುಭ ಕೋರಿ ಸಂತೋಷಪಟ್ಟನು. ರಂಗಣ್ಣನೂ ಸಹ ಸಂತೋಷಪಟ್ಟು ಅವಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಲೋಚಿಸುತ್ತಿದ್ದನು. ಆ ಸಮಯದಲ್ಲಿ ಅವನಿಗೆ ಮಗಳ ವಿದ್ಯಾಭ್ಯಾಸದ ಹಣದ ಬಗ್ಗೆ ಚಿಂತೆಯಾಯಿತು. ಅವನ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಮುಂದೆ ಓದಿಸಲು ಸಾಧ್ಯವಿಲ್ಲ ಎಂದು ರಂಗಣ್ಣನು ಕೈಚೆಲ್ಲಿದನು.

ಅದೇ ಚಿಂತೆಯಲ್ಲಿ ಅವನ ಆರೋಗ್ಯ ಹದಗೆಟ್ಟಿತು. ಅವನು ಮುಖ್ಯಸ್ಥನ ಮನೆಗೆ ಕೆಲಸಕ್ಕೆ ಹೋಗಲು ಆಗಲಿಲ್ಲ. ವಿಷಯ ತಿಳಿದ ರಾಜಬಾಬು ರಂಗಣ್ಣನ ಮನೆಗೆ ಬಂದು ಕುಶಲೋಪಚಾರ ವಿಚಾರಿಸಿದನು. “ರಂಗಣ್ಣ, ನಿನ್ನ ಮಗಳು ಬಹಳ ಬುದ್ಧಿವಂತೆ ಹಾಗೂ ಸಮರ್ಥಳಾಗಿದ್ದಾಳೆ. ಅವಳ ವಿದ್ಯಾಭ್ಯಾಸಕ್ಕೆ ಏನೇ ಸಹಾಯ ಬೇಕಿದ್ದರೂ ನಾನು ಮಾಡುತ್ತೇನೆ” ಎಂದನು. ಆದರೆ ರಂಗಣ್ಣನ ಸ್ವಾಭಿಮಾನಿ ಮನಸ್ಸು ಒಪ್ಪಲಿಲ್ಲ. ಆಗ ರಂಗಣ್ಣನ ಹೆಂಡತಿ, “ಇನ್ನೂ ಹೆಚ್ಚಿನ ಕೆಲಸ ಮಾಡಿ ಹಣವನ್ನು ಗಳಿಸಬಹುದು. ನಾನು ಸಹ ಕೆಲಸಕ್ಕೆ ಬರುತ್ತೇನೆ. ಮುಖ್ಯಸ್ಥರ ಸಹಾಯ ಒಪ್ಪಿಕೊಳ್ಳಿ” ಎಂದಳು.

ಮಗಳ ವಿದ್ಯಾಭ್ಯಾಸಕ್ಕಾಗಿ ರಂಗಣ್ಣ ಒಪ್ಪಿಕೊಳ್ಳಲೇಬೇಕಾಯಿತು. ನಂತರ ರಾಜಬಾಬು ಮಗಳ ವಿದ್ಯಾಭ್ಯಾಸಕ್ಕೆ ನೆರವಾದನು. ಚಿನ್ನು ಮುಂದೆ ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆದು, ಸಮಾಜದಲ್ಲಿ ಮಾದರಿ ಮಹಿಳೆಯಾದಳು. ಎಷ್ಟೇ ಕಷ್ಟ ಬಂದರೂ ಸ್ವಾವಲಂಬಿಯಾಗಿ ಬದುಕಬೇಕು ಎಂಬುದನ್ನು ತಂದೆ ಕಲಿಸಿದ ಪಾಠದಂತೆ ಅವಳು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಳು. ವಿದ್ಯೆಗೆ ಯಾವುದೇ ಲಿಂಗ ಭೇದವಾಗಲಿ, ಬಡವ-ಶ್ರೀಮಂತ ಎಂಬ ವ್ಯತ್ಯಾಸವಾಗಲಿ ಇಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿದರೆ ಖಂಡಿತ ಒಳ್ಳೆಯದಾಗುತ್ತದೆ ಎಂಬುದು ಈ ಕಥೆಯ ಸಾರವಾಗಿದೆ.

ಎಂ.ಎಂ.ಸಿಂಧು. ೯ನೇ ತರಗತಿ
ಸರ್ಕಾರಿ ಪ್ರೌಢಶಾಲೆ ಬಸರಕೋಡು. ಹಗರಿಬೊಮ್ಮನಹಳ್ಳಿ(ತಾ)

Please follow and like us:

 

 

 

 

 

Translate »
[t4b-ticker]
error: Content is protected !!