April 4, 2026

Hampi times

Kannada News Portal from Vijayanagara

ಬಸವಾಮೃತ-೨ ವಚನ ವೈಭವ – ಅರಿವಿನ ಬೆಳಕು : ಬಿಎಂಆರ್

https://youtu.be/NHc6OMSu0K4?si=SI_K4goOPEgwo6h2

ಬಸವಾಮೃತ-೨
ವಚನ ವೈಭವ – ಅರಿವಿನ ಬೆಳಕು

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯ
ಕಾಂಚನಕ್ಕೆ ವೇಳೆಯಲ್ಲದ ಲಿಂಗಕ್ಕೆ ವೇಳೆಯಲ್ಲ
ಹಡಿಕೆಗೆ ಮೆಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ || ೩೧೪ ||

ಸಾಧಕನೊಬ್ಬನು ತನ್ನ ಸಾಧನೆಯಲ್ಲಿ ಮುಂದುವರೆಯು ತ್ತಿರುವಾಗ ಮನಸ್ಸು, ಬುದ್ಧಿ, ದೇಹ ದೃಢವಾಗಿರಬೇಕು. ಅಂತಿಮ ಗುರಿಯ ಕಡೆಗೆ ಏಕದೃಷ್ಟಿಯನ್ನಿಟ್ಟು ಸಾಧನೆಯ ಹಾದಿಯಲ್ಲಿ ನಡೆಯಬೇಕು. ಈ ದಾರಿಯಲ್ಲಿ ಸಾಗುತ್ತಿರುವಾಗ ಇದರಿಂದ ವಿಮುಖ ನನ್ನಾಗಿಸಲು ಆಸೆ, ಮೋಹ ಇತ್ಯಾದಿ ಅರಿಷಡ್ವರ್ಗಗಳು ಕಾಡುತ್ತಿರುತ್ತವೆ. ಎಂತಹ ಮೋಹವನ್ನಾದರೂ ದಾಟಿಕೊಂಡು ಸಾಧಿಸಿ ಅಂತಿಮವಾಗಿ ಶಿವ ಸಾಕ್ಷಾತ್ಕಾರವನ್ನು ಪಡೆಯಬೇಕು ಎನ್ನುವುದನ್ನು ಇಲ್ಲಿ ಬಸವೇಶ್ವರ ದೇವರು ಅತ್ಯಂತ ಹೃದ್ಯವಾಗಿ ಶ್ರೇಷ್ಠ ಕವಿತೆಯ ರೂಪದಲ್ಲಿ ಹೇಳಿದ್ದಾರೆ.

 

ಮಾನವನ ಸಾಧನೆಗೆ ಅಡ್ಡಿಯಾಗುವ ಕಾಂಚನದ ಕುರಿತು ಇಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲಾ ಮೋಹಗಳಿಗೂ ಇದನ್ನು ಅನ್ವಯಿಸಬಹುದು. ಚಿನ್ನವನ್ನು ಇಲ್ಲಿ ನಾಯಿಗೆ ಹೋಲಿಸಿದ್ದಾರೆ. ನಾಯಿಯನ್ನು ನಮ್ಮ ಮನೆ, ಹೊಲ, ತೋಟಗಳನ್ನು ಕಾಯಲು, ನಮ್ಮ ರಕ್ಷಣೆಗಾಗಿ ಸಾಕಿರುತ್ತೇವೆ. ಆದರೆ ನಾಯಿಯ ಕುರಿತು ಅತಿಯಾದ ಮೋಹ ಇರಬಾರದು. ಹಾಗೆಯೇ ಚಿನ್ನ ಅಥವಾ ಹಣವು ನಮ್ಮ ಕಾಯಕದ ಮೂಲಕ ನಮಗೆ ದೊರೆಯಬೇಕು. ದಾಸೋಹದ ಮೂಲಕ ಅದನ್ನು ವಿನಿಯೋಗಿಸಬೇಕು. ಹಣದ ವಿಪರೀತ ಸಂಗ್ರಹ ಅಥವಾ ಅದರ ಆಸೆ ನಮ್ಮ ಸಾಧನೆಗೆ ಅಡ್ಡಿ ಎಂಬುದನ್ನೂ ಇಲ್ಲಿ ಹೇಳಿದ್ದಾರೆ. ಹಣವನ್ನು ಎಷ್ಟು ಸಂಗ್ರಹ ಮಾಡಿದರೂ ಇನ್ನಷ್ಟು ಬೇಕು ಎನ್ನುವ ಮೋಹವನ್ನು ಮನದಲ್ಲಿ ಮೂಡಿಸುತ್ತದೆ. ಬಸವಣ್ಣನವರು ರಾಜ್ಯದ ಭಂಡಾರಿ ಆಗಿದ್ದವರು. ಹಣದ ಸಂಗ್ರಹ ಮತ್ತು ವಿನಿಯೋಗ ಹಾಗೂ ಅದರೆಲ್ಲ ಒಳಿತು ಕೆಡುಕುಗಳ ಅಪಾರ ಜ್ಞಾನ ಅವರಿಗಿತ್ತು. ಕೂಡಲಸಂಗಮನ ಭಕ್ತಿ, ಪೂಜೆ, ಆರಾಧನೆಗೆ ಇದು ಅಡ್ಡಿಯಾಗುತ್ತದೆ ಎಂದು ಅವರು ಭಾವಿಸಿದ್ದರು. ನಾಯಿಯಂತಹ ಪ್ರಾಣಿಯಂತೆ ಇರುವ ಹಣದ ಆಸೆಗೆ ಬಲಿಯಾಗಿ ನಾನು ನಿಮ್ಮನ್ನು ಮರೆಯುತ್ತಿದ್ದೇನೆ. ಇದರ ಮೋಹದಿಂದ ನಾನು ಹೊರಬಂದು ಶರಣರ ಸಂಗದಲ್ಲಿದ್ದು ಸದಾ ನಿಮ್ಮ ಪೂಜೆಯಲ್ಲಿ ತೊಡಗಬೇಕು ಎಂದು ಹೇಳುತ್ತಾರೆ. ನನ್ನ ಸ್ಥಿತಿ ಹೇಗಿದೆ ಎಂದರೆ ನಾನು ಲಿಂಗಕ್ಕೆ ವೇಳೆಯಾಗಬೇಕಿತ್ತು ಆದರೆ ಕಾಂಚನಕ್ಕೆ ವೇಳೆಯಾಗಿದ್ದೇನೆ. ಇದು ನಾನು ಮಾಡುತ್ತಿರುವ ಮಹಾ ಅಪರಾಧವಾಗಿದೆ. ವೇಳೆ ಅಥವಾ ವೇಳೆವಾಳಿ ಎಂದರೆ ತನ್ನ ಒಡೆಯನಿಗೆ ಸಮರ್ಪಿತವಾದ, ಪ್ರಾಣ ಕೊಡಲು ಸಿದ್ಧವಾದ ವ್ಯಕ್ತಿ. ನಾನು ಶಿವನಿಗೆ ವೇಳೆಯಾಗಬೇಕಿತ್ತು. ಅದು ನನ್ನ ಬದುಕಿನ ಪರಮೋದ್ದೇಶವಾಗಿತ್ತು. ಶಿವನನ್ನು ಸೇರಿ ಶಿವಗಣಗಳಲ್ಲಿ ಒಂದಾಗಬೇಕು ಎನ್ನುವ ಮಹಾಮಣಿಹವನ್ನು ಮರೆತು ದ್ರವ್ಯಕ್ಕೆ ವೇಳೆಯಾಗಿಬಿಟ್ಟಿದ್ದೇನೆ ಎಂದು ವೇದನೆ ಪಡುತ್ತಾರೆ. ದುರ್ಗಂಧವನ್ನು ಮೂಸುವ, ಕೊಳೆಯನ್ನು ತಿನ್ನುವ ನಾಯಿಗೆ ಅಮೃತದ ರುಚಿಯೇನು ತಿಳಿಯುತ್ತದೆ. ಶಿವನ ಸಾಕ್ಷಾತ್ಕಾರಕ್ಕಾಗಿ ಇಷ್ಟಲಿಂಗ ಧರಿಸಿ, ಗುರುಮುಖದಲ್ಲಿ ಪಂಚಾಚಾರ, ಅಷ್ಟಾವರಣ, ಷಟ್ಸ್ಥಲಗಳ ಸಾಧನೆ ಮಾಡುವ ಸಾಧಕರಿಗೆ ಈ ಕಾಂಚನದ ಮೋಹ ಇರಬಾರದು. ಇದು ಅವರ ಸಾಧನೆಗೆ ಅಡ್ಡಿಯಾಗುತ್ತದೆ. ಶಿವನ ಸಾನ್ನಿಧ್ಯವೇ ಅಮೃತ. ನಮ್ಮ ಗಮನ, ಮನಸ್ಸು ಬುದ್ಧಿ, ಸದಾ ಅದರೆಡೆಗೆ ಇರಬೇಕು. ಮೃತ್ಯುವಿನಿಂದ ಪಾರಾಗಲು ಪರಶಿವನನ್ನು ಸೇರಲು ಲೋಕವೊಡ್ಡುವ ಮಾಯೆಯಿಂದ ಹೊರಬರಬೇಕು ಎಂದು ಸಾಧಕರಿಗೆ ಅಣ್ಣ ತಿಳಿ ಹೇಳಿದ್ದಾರೆ.

ಸಾಮಾನ್ಯರಾದ ಲೌಕಿಕರಿಗೂ ಇದು ಅನ್ವಯವಾ ಗುತ್ತದೆ. ಕಾಯಕದಿಂದ ಗಳಿಸಿದ ಹಣವನ್ನು ದಾಸೋ ಹದ ಮೂಲಕ ವಿನಿಯೋಗ ಮಾಡಿ ಶಿವನ ಕೃಪೆಗೆ ಪಾತ್ರರಾಗಬೇಕು. ಹಣ ಸಂಗ್ರಹಣೆಯ ಅತಿಯಾದ ಮೋಹ ವ್ಯಕ್ತಿಗಷ್ಟೇ ಅಲ್ಲದೆ ಸಮಾಜಕ್ಕೂ ಕೆಡುಕನ್ನು ಉಂಟು ಮಾಡುತ್ತದೆ. ಇದರಿಂದ ಮಾನವ ಕುಲ ಹೊರಬರಬೇಕು ಎಂದು ಬಸವಣ್ಣ ತಿಳಿಯ ಹೇಳಿದ್ದಾರೆ.


– ಬಿ.ಎಂ.ರಾಜಶೇಖರ, ಹೊಸಪೇಟೆ

Please follow and like us:

 

 

 

 

 

Translate »
[t4b-ticker]
error: Content is protected !!