https://youtu.be/NHc6OMSu0K4?si=SI_K4goOPEgwo6h2

ಬದಲಾದ ಶೈಲಿ ಮಾರಕ | ರಕ್ತದಾನವೇ ಶ್ರೇಷ್ಠ ದಾನ
ಹಂಪಿ ಟೈಮ್ಸ್ ಕೊಟ್ಟೂರು
ಬದಲಾದ ಜೀವನ ಹಾಗೂ ಆಹಾರ ಶೈಲಿಯಿಂದಾಗಿ ಇಂದು ಮನುಷ್ಯನು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ ಎಂದು ಕೊಟ್ಟೂರು ಕಟ್ಟೇಮನಿ ಹಿರೇಮಠದ ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ಕೊಟ್ಟೂರಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಯೂನಿಕ್ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಭಾನುವಾರ ಮಾತನಾಡಿದರು. ಫಲವತ್ತತೆ ಮತ್ತು ಹೆಚ್ಚಿನ ಇಳುವರಿಗಾಗಿ ಭೂಮಿಯಲ್ಲಿ ರಾಸಾಯನಿಕಗಳನ್ನು ಬಳಸುತ್ತಿರುವುದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರವು ರೈತರಿಗೆ ಪ್ರೋತ್ಸಾಹ ನೀಡಿ ಸಾವಯವ ಕೃಷಿಯತ್ತ ಸಾಗಿಸಬೇಕಾದ ಜವಾಬ್ದಾರಿ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ತಜ್ಞರನ್ನು ನೇಮಕ ಮಾಡಿದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಯೂನಿಕ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಎಂ.ಈಶ್ವರಯ್ಯ ಮಾತನಾಡಿ, ಟ್ರಸ್ಟ್ ಸದಸ್ಯರು ತಮ್ಮ ದುಡಿಮೆಯ ಹಣದಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿದ್ದು, ಶಿಬಿರದಲ್ಲಿ ಪತ್ತೆಯಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಈ ಶಿಬಿರದಲ್ಲಿ ಸುಮಾರು 350ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು ಹಾಗೂ ರಕ್ತದಾನಿಗಳ ಮೂಲಕ 50 ಯೂನಿಟ್ ರಕ್ತ ಸಂಗ್ರಹವಾಯಿತು. ಕಾರ್ಯಕ್ರಮದಲ್ಲಿ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ದಿಲೀಪ್, ಡಾ.ತೇಜಸ್ವಿನಿ, ಡಾ.ನವೀನ್, ಇಕೋ ತಜ್ಞೆ ಅಮೀನಾ, ಸುಷ್ಮಿತಾ ಹಾಗೂ ಸ್ಥಳೀಯ ವೈದ್ಯರಾದ ಡಾ. ಸಂಜಯ್, ಡಾ.ಜಿಎಂ ಕರುಣಂ ಸೇರಿದಂತೆ ಟ್ರಸ್ಟ್ನ ರಾಘವೇಂದ್ರ ಭಂಡಾರಿ ಮತ್ತು ವಿರುಪಾಕ್ಷ ಉಪಸ್ಥಿತರಿದ್ದರು.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ