https://youtu.be/NHc6OMSu0K4?si=SI_K4goOPEgwo6h2

ಪೊಲೀಸರ ಸೇವೆ ಶ್ಲಾಘಿಸಿದ ಸಲೀಮ ಪಾಶ | ವಿಜಯನಗರದಲ್ಲಿ ಅದ್ಧೂರಿ ಪೊಲೀಸ್ ಧ್ವಜ ದಿನಾಚರಣೆ
ಹಂಪಿ ಟೈಮ್ಸ್ ಹೊಸಪೇಟೆ
ಪೊಲೀಸರ ಶೌರ್ಯ, ತ್ಯಾಗ ಮತ್ತು ಸಾರ್ವಜನಿಕ ನಂಬಿಕೆಯೇ ಇಲಾಖೆಯ ನಿಜವಾದ ಶಕ್ತಿ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಮ ಪಾಶ ಅಭಿಪ್ರಾಯಪಟ್ಟರು.
ವಿಜಯನಗರ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 1965ರ ಏಪ್ರಿಲ್ 2 ರಂದು ಪೊಲೀಸ್ ಕಾಯ್ದೆ ಜಾರಿಗೆ ಬಂದ ನೆನಪಿಗಾಗಿ ಈ ಐತಿಹಾಸಿಕ ದಿನವನ್ನು ಆಚರಿಸಲಾಗುತ್ತಿದ್ದು, ಇದು ಇಲಾಖೆಗೆ ಕಾನೂನು ಚಲಾಯಿಸುವ ಅಧಿಕಾರ ನೀಡಿದೆ ಎಂದರು. ಪೊಲೀಸರು ಒತ್ತಡವನ್ನು ಮನೆಗೆ ಕೊಂಡೊಯ್ಯದೆ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಪದಕ ವಿಜೇತ ಅಧಿಕಾರಿಗಳಾದ ಶ್ರೀಹರಿ ಬಾಬು, ಸಂತೋಷ್ ಚೌವ್ಹಾಣ್ ಮತ್ತು ಕೋದಂಡ ಪಾಣಿ ಅವರ ಸೇವೆಯನ್ನು ಇದೇ ವೇಳೆ ಹರ್ಷ ವ್ಯಕ್ತಪಡಿಸಿ ಶ್ಲಾಘಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಅವರು ಪ್ರಗತಿ ವರದಿ ಮಂಡಿಸಿ, 2025-26ನೇ ಸಾಲಿನಲ್ಲಿ ಸಿಬ್ಬಂದಿ ಕಲ್ಯಾಣಕ್ಕಾಗಿ ಆರೋಗ್ಯ ಭಾಗ್ಯ ಮತ್ತು ಶೈಕ್ಷಣಿಕ ಧನಸಹಾಯ ಸೇರಿದಂತೆ ಒಟ್ಟು ₹12.61 ಲಕ್ಷ ನೆರವು ನೀಡಲಾಗಿದೆ ಎಂದರು. ಅಲ್ಲದೆ ಧ್ವಜ ಮಾರಾಟದಿಂದ ಸಂಗ್ರಹವಾದ ₹26.82 ಲಕ್ಷ ನಿಧಿಯನ್ನು ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಸ್ವಾಗತಿಸಿದರೆ, ಪೊಲೀಸ್ ಉಪಾಧೀಕ್ಷಕ ಡಾ.ಮಂಜುನಾಥ್ ವಂದಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ವಿವಿಧ ದರ್ಜೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



More Stories
ಬ್ರಿಡ್ಜ್ ಟು ಬೆಂಗಳೂರು’ ಮೂಲಕ ನವಶಕ್ತಿಯ ಅನಾವರಣ
ಹಾರ್ಮುಜ್ ಜಲಸಂಧಿ ಮುಕ್ತ
ಎಲ್ಲರಿಗೂ ಅಂಬೇಡ್ಕರ್ ಬದುಕು ಸ್ಫೂರ್ತಿದಾಯಕ