https://youtu.be/NHc6OMSu0K4?si=SI_K4goOPEgwo6h2

ಬೆಂಗಳೂರು: ಸಾರ್ವಜನಿಕರಿಗೆ ನಿಖರವಾದ ರೋಗನಿರ್ಣಯ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ‘ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ’ (ಸಿಎಆರ್ಐ) ಮಹತ್ವದ ಮೈಲುಗಲ್ಲು ಸಾಧಿಸಿದೆ. ಜೈವಿಕ ರಸಾಯನಶಾಸ್ತ್ರ ಮತ್ತು ಹೆಮಟಾಲಜಿ ವಿಭಾಗಗಳಲ್ಲಿ ಸಂಸ್ಥೆಯು ‘ಐಎಸ್ಒ 15189:2022’ ಮಾನ್ಯತೆ ಪಡೆದಿದ್ದು, ಈ ಸಾಧನೆ ಮಾಡಿದ ಮೊದಲ ‘ಸಿಸಿಆರ್ಎಎಸ್’ (CCRAS) ಸಂಸ್ಥೆಯಾಗಿ ಹೊರಹೊಮ್ಮಿದೆ.
ಈ ಐತಿಹಾಸಿಕ ಸಾಧನೆಯ ಕುರಿತು ಆಯುಷ್ ಸಚಿವಾಲಯದ ಗೌರವಾನ್ವಿತ ಸಹಾಯಕ ಸಚಿವ ಪ್ರತಾಪರಾವ್ ಜಾಧವ್ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಈ ಮಾನ್ಯತೆಯು ರೋಗಿಗಳಿಗೆ ವಿಶ್ವಾಸಾರ್ಹ ರೋಗನಿರ್ಣಯ ಸೇವೆ ಸಿಗುವುದನ್ನು ಖಚಿತಪಡಿಸುತ್ತದೆ. ಆಯುಷ್ ಮೂಲಸೌಕರ್ಯವನ್ನು ಗುಣಮಟ್ಟದ ಮಾನದಂಡವಾಗಿ ಪರಿವರ್ತಿಸುವಲ್ಲಿ ಇದು ಪ್ರಮುಖ ಹೆಜ್ಜೆ ಎಂದರು.
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮಾತನಾಡಿ, ಸಾಂಪ್ರದಾಯಿಕ ಔಷಧ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ರೋಗನಿರ್ಣಯವನ್ನು ಸಂಯೋಜಿಸಿರುವುದು ಸಂಶೋಧನೆ ಮತ್ತು ರೋಗಿ-ಕೇಂದ್ರಿತ ಆರೈಕೆಯನ್ನು ಬಲಪಡಿಸುತ್ತದೆ ಎಂದರು.

ಸಿಸಿಆರ್ಎಎಸ್ ಮಹಾನಿರ್ದೇಶಕ ಪ್ರೊ. ರಬಿನಾರಾಯಣ ಆಚಾರ್ಯ ಮಾತನಾಡಿ, ಸಂಸ್ಥೆಯು ಎನ್ಎಬಿಎಚ್ ಮತ್ತು ಎನ್ಎಬಿಎಲ್ ಹಂತಗಳನ್ನು ದಾಟಿ ಈಗ ಜಾಗತಿಕ ಮಟ್ಟದ ಮಾನ್ಯತೆ ಪಡೆದಿರುವುದು ಆಯುರ್ವೇದ ಸಂಶೋಧನೆಯನ್ನು ವೈಜ್ಞಾನಿಕವಾಗಿ ಉನ್ನತ ಮಟ್ಟಕ್ಕೇರಿಸಿದೆ ಎಂದರು.
ಬೆಂಗಳೂರಿನ ಸಿಎಆರ್ಐ ಮುಖ್ಯಸ್ಥ ಡಾ. ಸುಲೋಚನಾ ಭಟ್ ಮಾತನಾಡಿ, ಇದು ನಮ್ಮ ತಂಡದ ಪ್ರಾಮಾಣಿಕ ಪ್ರಯತ್ನದ ಫಲ. ಡಾ. ವಿದ್ಯಾಶ್ರೀ ಅಂಚನ್ ಮತ್ತು ಸಿಎಆರ್ಐ ತಂಡದ ಶ್ರಮದಿಂದಾಗಿ ಇಂದು 50ಕ್ಕೂ ಹೆಚ್ಚು ಪರೀಕ್ಷಾ ಮಾನದಂಡಗಳಿಗೆ ಮಾನ್ಯತೆ ಸಿಕ್ಕಿದೆ ಎಂದರು.
ಪ್ರಸ್ತುತ ಈ ಪ್ರಯೋಗಾಲಯವು ರಕ್ತದ ಗ್ಲೂಕೋಸ್, ಲಿಪಿಡ್ ಪ್ರೊಫೈಲ್, ಥೈರಾಯ್ಡ್ ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆ ಸೇರಿದಂತೆ ಸಮಗ್ರ ಪರೀಕ್ಷೆಗಳನ್ನು ನಡೆಸುತ್ತಿದೆ. 2021ರಲ್ಲಿ ಕೇವಲ 2,770 ಇದ್ದ ಪರೀಕ್ಷೆಗಳ ಸಂಖ್ಯೆ 2026ರ ವೇಳೆಗೆ 1.55 ಲಕ್ಷಕ್ಕೆ ಏರಿಕೆಯಾಗಿರುವುದು ಸಂಸ್ಥೆಯ ದಕ್ಷತೆಗೆ ಸಾಕ್ಷಿಯಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ರೋಗಿಗಳು ಈಗ ತಮ್ಮ ಮೊಬೈಲ್ ಫೋನ್ಗಳಲ್ಲೇ ವರದಿಗಳನ್ನು ಪಡೆಯುವ ಸುಲಭ ಸೌಲಭ್ಯವನ್ನೂ ಕಲ್ಪಿಸಲಾಗಿದೆ



More Stories
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ
ಹೊಸಪೇಟೆ ನ್ಯಾಷನಲ್ ಕಾಲೇಜ್ನ ಬಿ.ಮಾನಸ ರಾಜ್ಯಕ್ಕೆ 8ನೇ ಶ್ರೇಯಾಂಕ
ಸಂಡೂರಿನ ನಾನಾವಟೆ ಕಾಲೇಜು ಸಾಧನೆ: ರಾಜ್ಯಕ್ಕೆ 5 ಮತ್ತು 7ನೇ ರ್ಯಾಂಕ್