https://youtu.be/NHc6OMSu0K4?si=SI_K4goOPEgwo6h2

ವಿಜಯನಗರ ಕಾಲೇಜ್ ಅಧ್ಯಕ್ಷ ಎನ್.ಮೆಟ್ರಿ ಮಲ್ಲಿಕಾರ್ಜುನ ಹೇಳಿಕೆ | 20 ಕಂಪನಿಗಳು ಭಾಗಿ
ಹಂಪಿ ಟೈಮ್ಸ್ ಹೊಸಪೇಟೆ
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೀ.ವಿ.ಸಂಘದ ವಿಜಯನಗರನಗರ ಮಹಾವಿದ್ಯಾಲಯದಿಂದ ಮೊದಲ ಬಾರಿಗೆ 20 ಕಂಪನಿಗಳ ಸಹಯೋಗದಲ್ಲಿ ಗ್ರಾಮೀಣ ಪ್ರತಿಭೆ ಉದ್ಯೋಗ ಮೇಳ-2024 (ಪ್ಲೇಸ್ಮೆಂಟ್) ಆಯೋಜಿಸಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಇದು ಸಹಕಾರಿಯಾಗುತ್ತದೆ ಎಂದು ವಿಜಯನಗರ ಕಾಲೇಜ್ ಅಧ್ಯಕ್ಷ ಮೆಟ್ರಿ ಮಲ್ಲಿಕಾರ್ಜುನ ಹೇಳಿದರು.
ನಗರದ ವಿಜಯನಗರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ಮತ್ತು ಜೆಎಸ್ಡಬ್ಲ್ಯೂ ಫೌಂಡೇಶನ್ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಉದ್ಯೋಗ ಮೇಳದಿಂದ ಗ್ರಾಮೀಣ ಯುವ ಪ್ರತಿಭೆಗಳು ಉದ್ಯೋಗ ಹರಸಿ ನಾನಾ ಕಂಪನಿಗಳ ಬಾಗಿಲು ತಟ್ಟುವುದು ತಪ್ಪುತ್ತದೆ. ಉದ್ಯೋಗಾಧರಿತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಶಿಸ್ತು, ಕಠಿಣ ಪರಿಶ್ರಮ, ತಾಳ್ಮೆ ಅತ್ಯಗತ್ಯ. ಉದ್ಯೋಗ ಮೇಳದಲ್ಲಿ ಭಾಗವಹಿಸಲು 20 ಕಂಪನಿಗಳು ಮುಂದಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಡಿಪ್ಲೋಮ ಮತ್ತು ಪಿಜಿ ಪದವೀಧರರು ಸೇರಿದಂತೆ 1022 ಅಭ್ಯರ್ಥಿಗಳು ನೋಂದಾಯಸಿದ್ದು, 700ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.


ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಪ್ರಭುಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆಯ್ಕೆಯಾದವರಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ನೀಡಲಾಗಿದೆ, ಆಯ್ಕೆಯಾದ ಅಭ್ಯರ್ಥಿಗಳಿಗೆ 2.1 ಲಕ್ಷ ರೂದಿಂದ ಗರಿಷ್ಠ 9 ಲಕ್ಷ ರೂವರೆಗೆ ಪ್ಯಾಕೇಜ್ ದೊರೆತಿದೆ. ನೋ ಬ್ರೋಕರ್, ರಿನೆಕ್ಸ್ ಟೆಕ್ನಾಲಜೀಸ್, ಅಪ್ಗ್ರೇಡ್, ಮ್ಯಾನ್ ಪವತ್, ಐ ಪ್ರೋಸೆಸ್, K12 ಟೆಕ್ನೋ ಸರ್ವೀಸಸ್ , ಪ್ರೈವೇಟ್ ಲಿಮಿಟೆಡ್, ಇಂಟೆಲ್ಲಿಪಾಟ್ ಸಾಫ್ಟ್ವೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಮುತ್ತೂಟ್ ಫೈನಾನ್ಸ್, ಲೆನ್ಸ್ಕಾರ್ಟ್, ಸೆಲ್ಕೋ ಫೌಂಡೇಶನ್, ಟಿವಿಎಸ್ ತರಬೇತಿ, ಪ್ರಗತಿ ಭಾರತ, ಮ್ಯಾಜಿಕ್ ಬಸ್, ಅಲ್ಸೆಕ್ ಟೆಕ್ನೋಲಾಜಿ ಸೇರಿದಂತೆ ಇತರ ಸಂಸ್ಥೆಗಳು ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿದವು. ಮೊದಲ ಉದ್ಯೋಗಮೇಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಸಿಬ್ಬಂದಿಗಳಲ್ಲಿ ಹರ್ಷ ತಂದಿದೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಎಲ್.ಬಸವರಾಜ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸಂಗನ ಬಸಪ್ಪ, ಸಂಘದ ಅಜೀವ ಸದಸ್ಯ ಅಶ್ವಿನ್ ಕೋತಂಬ್ರಿ, ಉದ್ಯೋಗಧಿಕಾರಿ ಸಿಕಂದರ್ ಬಾಷ, ಮೊಬಿಲೈಸೇಶನ್ ಮ್ಯಾನೇಜರ್ ಕೆ ಬಸವರಾಜ್ , ಪರಿಣಾಮ ವಿಭಾಗದ ಮುಖ್ಯಸ್ಥ ರಮೇಶ ಚಿಕ್ಕೇರಿ, IQAC ಸಂಯೋಜಕ ರವಿಕಿರಣ್, ಮಾನವ ಸಂಪನ್ಮೂಲ ವ್ಯವಸ್ಥಾಪಕರು, ಬಿಬಿಎ ವಿದ್ಯಾರ್ಥಿಗಳು ಇದ್ದರು.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ