https://youtu.be/NHc6OMSu0K4?si=SI_K4goOPEgwo6h2
ಪ್ರಾಣ ಬಲಿಗೆ ಕಾದಿರುವ ಕಬ್ಬಿಣದ ಸರಳುಗಳು | ಪ್ಲಾಟ್ ಫಾರಂ ದುರಸ್ತಿಗೆ ಮೀನಾಮೇಷ
ಬಸಾಪುರ ಬಸವರಾಜ್
ಹಂಪಿ ಟೈಮ್ಸ್ ಹೊಸಪೇಟೆ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಪ್ರಯಾಣಿಕರೆ ಜೀವಾಳವಾಗಿದ್ದರೂ, ಪ್ರಯಾಣಿಕರ ಸುರಕ್ಷತೆಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲಿ. ಬಸ್ ನಿಲ್ದಾಣದಲ್ಲಿ ಬಸ್ ಏರುವ ಪ್ಲಾಟ್ ಫಾರಂ ಗಳು ಕಿತ್ತೋಗಿ, ಕಬ್ಬಿಣದ ಸರಳುಗಳು ಜನರ ಪ್ರಾಣಕ್ಕಾಗಿ ಬಾಯ್ತೆರೆದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೆ ನಿರ್ಲ್ಯಕ್ಷ್ಯ ತೋರುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಜೆಎಸ್ ಡಬ್ಲ್ಯೂ ಕೇಂದ್ರ ಬಸ್ ನಿಲ್ದಾಣದ ಪ್ಲಾಟ್ ಫಾರಂ ಗಳ ತುದಿಗಳಲ್ಲಿ ಟೈಲ್ಸ್ ಗಳು ಕಿತ್ತೊಗಿವೆ. ಅಂಚಿಗೆ ಅಳವಡಿಸಿದ್ದ ಕಬ್ಬಿಣದ ಘರಂಡಾಲು ಕಿತ್ತೊಗಿದ್ದು, ನಡೆದಾಡುವ ಸ್ಥಳದಲ್ಲೇ ನಾನಾಕಡೆ ಕಬ್ಬಿಣದ ಸರಳು ತಲೆಎತ್ತಿವೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಬಸ್ ಸೀಟು ಹಿಡಿಯುವ, ಬಸ್ ಏರುವ ಅವಸರದಲ್ಲಿ ಕಾಲಿಗೆ ತಗುಲಿ ನೆಲಕ್ಕೆ ಬಿದ್ದರೆ ಪ್ರಾಣಕ್ಕೆ ಕುತ್ತು ಎದುರಾಗಬಹುದಾದ ಪರಿಸ್ಥಿತಿಯಿದ್ದರೂ ಸರಿಪಡಿಸಲು ಅಧಿಕಾರಿಗಳು ಗಮನಹರಿಸುತ್ತಿಲ್ಲ. ಜನ ಜೀವ ಕಳೆದುಕೊಂಡ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಪ್ರಯಾಣಿಕರು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ನಿತ್ಯ ವಾಗ್ವಾದ : ಪ್ರಯಾಣಿಕರನ್ನು ಆಹ್ವಾನಿಸಬೇಕಿದ್ದ ಸಾರಿಗೆ ನಿಗಮವು ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲೆ ಪ್ರವೇಶ ನಿಷೇಧ ಫಲಕ ಪ್ರದರ್ಶಿಸಿದೆ. ಕುಟುಂಬದ ಸದಸ್ಯರನ್ನು ಬಸ್ಸಿಗೆ ಏರಿಸಲು ಬರುವ ವಾಹನ ಸವಾರರ ಜೊತೆ ನಿಗಮದ ಸಿಬ್ಬಂದಿ ಮೇಲಾಧಿಕಾರಿಗಳ ಆದೇಶ ಪಾಲಿಸಲು ಖಾಸಗಿ ವಾಹನಗಳನ್ನು ತಡೆದು ಪ್ರಯಾಣಿಕರೊಂದಿಗೆ ನಿತ್ಯವೂ ವಾಗ್ವಾದ ನಡೆಯುತ್ತಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಬಸ್ ನಿಲ್ದಾಣದ ಆವರಣದೊಳಗೆ ಬಿಡದಂತೆ ಸಾರಿಗೆ ಸಿಬ್ಬಂದಿ ಬ್ಯಾರಿ ಪ್ರವೇಶದ್ವಾರದಲ್ಲೇ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ. ಪ್ರಯಾಣಿಕರನ್ನು ಬಸ್ ಗೆ ಏರಿಸಿ ಬರುವವರೆಗೂ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲೂ ವಾಹನಗಳನ್ನು ಕೆಲ ನಿಮಿಷ ನಿಲ್ಲಿಸಲು ಸಿಬ್ಬಂದಿ ಬಿಡುತ್ತಿಲ್ಲ. ಕುಟುಂಬದ ಸದಸ್ಯರನ್ನು ನಿಲ್ದಾಣಕ್ಕೆ ಬಿಡಲು ಮತ್ತು ಕರೆದೊಯ್ಯಲು ಬರುವ ವಾಹನಗಳಿಗೆ ಅಲ್ಪ ಸಮಯವಾದರೂ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
|| ಲಗೇಜ್ ಸಹಿತ ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ದರು ಬಸ್ಸಿನಲ್ಲಿ ಪ್ರಯಾಣ ಬೆಳೆಸುವುದು ಸಹಜ. ಕುಟುಂಬ ಸದಸ್ಯರನ್ನು ನಿಲ್ದಾಣಕ್ಕೆ ಬಿಡಲು ಮತ್ತು ಕರೆತರಲು ನಿಲ್ದಾಣಕ್ಕೆ ತೆರಳುವ ವಾಹನಗಳ ನಿಲ್ದಾಣದ ಒಂದು ಬದಿಯಾಗಲಿ, ರಸ್ತೆಯ ಪಕ್ಕದಲ್ಲಾದರೂ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ನಿಲ್ದಾಣದಲ್ಲಿ ಪ್ಲಾಟ್ ಪಾರಂ ಗಳಲ್ಲಿ ಕಿತ್ತೋಗಿರುವ ಟೈಲ್ಸ್, ಕಬ್ಬಿಣದ ಸರಳು ಸರಿಮಾಡಿ ಪ್ರಯಾಣಿಕರ ಜೀವ ರಕ್ಷಿಸಬೇಕು. ಪ್ರಯಾಣಿಕರ ಸಮಸ್ಯೆ ಕೇಳೋರಿಲ್ಲದಂತಾಗಿದೆ.
- ನಂಜುಂಡೇಶ್ವರ, ಹೊಸಪೇಟೆ
|| ನಿಲ್ದಾಣದ ಆವರಣದೊಳಗೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಖಾಸಗಿ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಸ್ಥಳವಿಲ್ಲ. ಹೊರಗಡೆಯೆ ವಾಹನ ನಿಲ್ಲಿಸಿ ಬರಬೇಕು. ಪ್ಲಾಟ್ ಫಾರಂ ಗಳಲ್ಲಿ ಎದ್ದಿರುವ ಕಬ್ಬಿಣದ ಸರಳು ಮತ್ತು ಟೈಲ್ಸ್ ರಿಪೇರಿ ಕಾರ್ಯ ಮಾಡಲಾಗುವುದು.
- ಡಿ.ಕೊಟ್ರಪ್ಪ, ಡಿ.ಸಿ., ಕ.ಕ.ರ.ಸಾ. ನಿಗಮ , ಹೊಸಪೇಟೆ ಉಪವಿಭಾಗ
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ