https://youtu.be/NHc6OMSu0K4?si=SI_K4goOPEgwo6h2
ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ಜೋಡಿ | ಮಕ್ಕಳನ್ನು ಹೆತ್ತರೆ ಸಾಲದು ಸಂಸ್ಕಾರ ಕಲಿಸಿ
ಹಂಪಿ ಟೈಮ್ಸ್ ಹೊಸಪೇಟೆ:
ಹೆಣ್ಣು-ಗಂಡು ದೇಹ ರಚನೆಯಲ್ಲಿ ಮಾತ್ರ ಭಿನ್ನ, ಮಾನಸಿಕವಾಗಿ ಸಮಾನರು, ರಾಜಕೀಯ ಸಮಾನತೆ ಸಿಕ್ಕಿರಬಹುದು ಆದರೆ ಮಾನಸಿಕ ಸಮಾನತೆ ಇನ್ನೂ ದೊರೆತಿಲ್ಲ. ಎಲ್ಲಾ ರಂಗಗಳಲ್ಲೂ ಸಮಾನತೆ ಸಿಕ್ಕಾಗ ಮಾತ್ರ ಬಸವಾದಿ ಶರಣರ ಆಶಯಗಳು ಈಡೇರುತ್ತವೆ ಎಂದು ಶ್ರೀ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಜಗಜ್ಯೋತಿ ಬಸವೇಶ್ವರರ 890ನೇ ಬಸವ ಜಯಂತಿ ಹಾಗೂ 49ನೇ ವರ್ಷದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯವಹಿಸಿ ಭಾನುವಾರ ಆಶೀರ್ವಚನ ನೀಡಿದರು. ಕರುಬರು-03, ವಾಲ್ಮೀಕಿ-04, ಆದಿಕರ್ನಾಟಕ-02, ಹರಿಜನ-02, ಕುರುಹಿನಶೆಟ್ಟಿ ನೇಕಾರ -01 ಸೇರಿ ಒಟ್ಟು 12 ಜೋಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐದು ದಶಕಗಳಿಂದಲೂ ಕೊಟ್ಟೂರುಸ್ವಾಮಿ ಮಠದಿಂದ ಸಾಮೂಹಿಕ ವಿವಾಹ ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ನಾಡಲ್ಲಿ ಸುಶಿಕ್ಷತರ ಸಂಖ್ಯೆ ಹೆಚ್ಚಾಗಲು ಹಾನಗಲ್ ಶ್ರೀಗಳ ಕೊಡುಗೆ ಅಪಾರ. ವಿರಕ್ತಮಠಗಳು ಉಚಿತ ಶಿಕ್ಷಣ, ಪ್ರಸಾದ ನಿಲಯಗಳನ್ನು ತೆರೆಯದಿದ್ದರೆ ಇಂದಿಗೂ ಹೆಬ್ಬಟ್ಟಿನವರ ಸಂಖ್ಯೆ ಹೆಚ್ಚಿರುತ್ತಿತ್ತು. ಸಮಾಜದಿಂದ ಮಠಗಳಿಗೆ ಬಂದ ಕಾಣಿಕೆ ಸಮಾಜಕ್ಕೆ ಅರ್ಪಿಸಲಾಗುತ್ತಿದೆ. ಈವರೆಗೂ ಸಾವಿರಾರು ಸಂಖ್ಯೆಯಲ್ಲಿ ಸರ್ವಧರ್ಮದವರು ಸಾಮೂಹಿಕ ವಿವಾಹವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತವರು ಮನೆಯ ಸಂಬಂಧಗಳನ್ನು ಕಳಚಿಕೊಂಡು ಗಂಡನೆ ದೈವನೆಂದು ಬರುವ ಹೆಣ್ಣನ್ನು ಗಂಡ ಸೇರಿದಂತೆ ಹುಡುಗನ ಮನೆಯವರು ಪ್ರೀತಿಯಿಂದ ಕಾಣಬೇಕು. ಹಾಗೇಯೆ ಹೆಣ್ಣು ಸಹ ಗಂಡನ ಕುಟುಂಬದ ಸದಸ್ಯರನ್ನು ತಂದೆ, ತಾಯಿ, ಸಹೋದರಿ ಸಹೋದರರಂತೆ ಭಾವಿಸಿಕೊಂಡಾಗ ಮನೆ ಮನಗಳಲ್ಲಿ ನೆಮ್ಮದಿ ನೆಲಸಲಿದೆ. ಮಕ್ಕಳನ್ನು ಹೆತ್ತರೆ ಸಾಲದು ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಸಂಸ್ಕಾರಯುತ ಮಕ್ಕಳು ಸುಭದ್ರ ಭಾರತಕ್ಕೆ ಆಧಾರಸ್ತಂಭವಾಗಲಿದ್ದಾರೆ. ಬಸವಣ್ಣನವರು ಸ್ತ್ರೀಯರಿಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟು, ಹೆಣ್ಣು-ಗಂಡು ದೇಹರಚನೆಯಲ್ಲಿ ಮಾತ್ರ ಭಿನ್ನ, ಮಾನಸಿಕವಾಗಿ ಸಮಾನರೆಂದು ಸಾರಿ ಸಮಾಜ ಕಟ್ಟಿದರು. 900 ವರ್ಷಗಳ ಹಿಂದೆಯ ಬಸವಣ್ಣನವರು ಸಹಜ ಜೀವನಕ್ಕೆ ಮಾದರಿಯಾಗಿದ್ದರು. ಬಸವಣ್ಣನವರ ಸ್ಮರಣೆಯೆ ಪವಿತ್ರ ಕಾರ್ಯ. ಮನುಷ್ಯ ತನ್ನ ಕುಲಗಳಿಂದ ಗುರುತಿಸಿಕೊಳ್ಳುವುದಕ್ಕಿಂತ ತಮ್ಮ ನಡೆ ನುಡಿ ಬದುಕಿನಿಂದ ಉನ್ನತಿ ಹೊಂದಬೇಕು. ಬಸವಣ್ಣನವವರ ಆದರ್ಶ ಚಿಂತನೆಗಳು ಇಂದಿಗೂ ಪರಿಪೂರ್ಣವಾಗಿ ಜಾರಿಗೊಳ್ಳದಿರುವುದು ನಮ್ಮಗಳ ಹಿನ್ನಡೆ ಎಂದೇ ಭಾವಿಸಬೇಕಾಗಿದೆ ಎಂದರು.
ಕೊಟ್ಟೂರುಸ್ವಾಮಿ ಶಾಖಾಮಠದ ಶ್ರೀಗಳಾದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕುರೇಗುಡ್ಡದ ಶ್ರೀ ಮಹಾಂತೇಶ್ವರ ಹಿರೇಮಠ, ಶ್ರೀ ನಿರಂಜನಪ್ರಭುದೇವರು, ಸಿದ್ದಲಿಂಗದೇವರು, ಸಿದ್ದೇಶ್ವರ ದೇವರು, ವಿಶ್ವೇಶ್ವರ ದೇವರು, ವೀ.ಲಿಂಗಾಯತ ಸಮಾಜದ ಅಧ್ಯಕ್ಷ ಹೆಚ್.ವಿ.ಶರಣಸ್ವಾಮಿ, ಕಾರ್ಯದರ್ಶಿ ಕೆ.ರವಿಶಂಕರ, ಸಮಾಜದ ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಗೊಗ್ಗ ಚನ್ನಬಸವರಾಜ, ಕೆ.ಗಂಗಾಧರ, ಹೆಚ್.ಕೆ.ಮಂಜುನಾಥ, ಕಿರಣ್ ಶಂಕ್ರಿ,, ಬಿ.ಚಿತ್ತಪ್ಪ, ಕೋರಿಶೆಟ್ಟಿ ಲಿಂಗಪ್ಪ, ಜಿ.ಮಲ್ಲಿನಾಥ, ಬಿ.ಜಿ.ಈಶ್ವರಪ್ಪ, ಅಶ್ವಿನ್ ಕೋತಂಬ್ರಿ, ಎನ್.ಎಸ್.ರೇವಣಸಿದ್ದಪ್ಪ, ಮಧುರಚನ್ನಶಾಸ್ತ್ರಿ, ಬಿ.ಎಂ.ಸೋಮಶೇಖರ, ಡಾ.ಎಂ.ಧರ್ಮನಗೌಡ, ಜೀರ್ ಕಾರ್ತಿಕ್, ಜಾಲಿ ಪ್ರಕಾಶ, ಕೆ.ರಂಗಪ್ಪ, ಕೆ.ಬಿ.ಶ್ರೀನಿವಾಸರೆಡ್ಡಿ, ಬಿ.ಮಲ್ಲೇಶಪ್ಪ, ಕಾಕುಬಾಳು ಮೃತ್ಯುಂಜಯಸ್ವಾಮಿ, ಅಕ್ಕನ ಬಳಗದ ಕೆ.ಗಂಗಮ್ಮ ಸೇರಿದಂತೆ ನಗರ-ಗ್ರಾಮೀಣ ಭಾಗದ ಮುಖಂಡರು ಉಪಸ್ಥಿತರಿದ್ದರು.
More Stories
ಜನರು ಧಂಗೆ ಏಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ , ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲು: ಉಪ ಲೋಕಾಯುಕ್ತ ಬಿ.ವೀರಪ್ಪ
ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ….ಜಯ ನಿಮ್ಮದೇ….
ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ