https://youtu.be/NHc6OMSu0K4?si=SI_K4goOPEgwo6h2
– ಡಬಲ್ ಇಂಜಿನ್ ಸರ್ಕಾರಗಳಿಂದ ಸರ್ವಸ್ಪರ್ಶಿ ಆಡಳಿತ
– ವಿಜಯನಗರ ಜಿಲ್ಲೆಯ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗಿ
– ಡಿಬಿಟಿ ಯಂತಹ ಕ್ರಾಂತಿಕಾರಿ ಯೋಜನೆಗಳ ಅನುಷ್ಠಾನ
– ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ಜನಸಾಮಾನ್ಯರನ್ನು ತಲುಪಿದ್ದೇವೆ
ಹಂಪಿಟೈಮ್ಸ್ ಹೊಸಪೇಟೆ :
ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಸಮಾಜದ ಎಲ್ಲಾ ವರ್ಗದ ಜನರನ್ನ ತಲುಪುವಂತಹ ಸರ್ವಸ್ಪರ್ಶಿ ಆಡಳಿತವನ್ನು ನೀಡಿದೆ. ವಿಜಯನಗರ ಜಿಲ್ಲೆ ನೂತನವಾಗಿ ಅಸ್ತಿತ್ವಕ್ಕೆ ಬಂದ ನಂತರದಿಂದ ಇದುವರೆಗೆ ವಿವಿಧ ಮೂಲಗಳಿಂದ ಒಟ್ಟಾರೆಯಾಗಿ 6,173 ಕೋಟಿ ರು ಗಳಷ್ಟು ಬೃಹತ್ ಗಾತ್ರದ ಅನುದಾನ ಒದಗಿಸಲಾಗಿದೆ. ಒಂದು ವರ್ಷದಲ್ಲಿ 17.30 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದಿರುವುದು ಮಹತ್ ಸಾಧನೆಯೇ ಸರಿ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ಹೇಳಿದರು.
ಇಂದು ಹೊಸಪೇಟೆಯಲ್ಲಿ ಜಿಲ್ಲಾಡಳಿತ ದ ವತಿಯಿಂದ ಆಯೋಜಿಸಲಾಗಿದ್ದ ವಿಜಯನಗರ ಜಿಲ್ಲೆಯ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಸವರಾಜ ಬೊಮ್ಮಾಜಿ ಅವರ ನೇತೃತ್ವದ “ಡಬಲ್ ಇಂಜಿನ್” ಸರಕಾರಗಳು ಪಾರದರ್ಶಕತೆಯಿಂದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿವೆ.
ಸರ್ಕಾರದ ಕಾರ್ಯಕ್ರಮಗಳು ಫಲಾನುಭವಿಗಳಿಗೆ ನೇರವಾಗಿ ಮುಟ್ಟಿಸಲು ಡಿಬಿಟಿ ಯಂತಹ ಕ್ರಾಂತಿಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇಂದು ಪಿಎಂ ಸ್ವನಿಧಿ, ರೈತ ವಿಧ್ಯಾ ನಿಧಿ, ರೈತ ಶಕ್ತಿ ಯೋಜನೆಗಳು ಡಿಬಿಟಿ ಮುಖಾಂತರವಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿವೆ. ಭಾರತ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರಕಾರದ ಹಲವು ಯೋಜನೆಗಳ ಮೂಲಕ ಸಮಾಜದ ಕಟ್ಟ ಕಡೆಯ ಜನಸಾಮಾನ್ಯರನ್ನ ತಲುಪಿದ್ದೇವೆ ಎಂದರು.
ನೂತನ ವಿಜಯನಗರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿಯಲ್ಲಿ ಜನನದಿಂದ ಮರಣದವರೆಗೂ ವಿವಿಧ ಇಲಾಖೆಗಳಿಂದ ಯೋಜನೆಗಳನ್ನು ಜಾರಿಗೊಳಿಸಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕಾರ್ಯಯೋಜನೆ ರೂಪಿಸಿ ಯಶಸ್ವಿಗೊಳಿಸಲಾಗಿದೆ. ಜಿಲ್ಲೆಯ ಹೊಸಪೇಟೆ ತಾಲ್ಲೂಕು ಸೇರಿದಂತೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ ಹಾಗೂ ಹೂವಿನ ಹಡಗಲಿ ಭಾಗದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲೆ ರಚನೆಯಾದ ನಂತರದಿಂದ ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಳೆದ ಒಂದು ವರ್ಷದಲ್ಲಿ 6,173 ಕೋಟಿ ರು ಅನುದಾನ, ಜಿಲ್ಲೆಯ 17.30 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎನ್ನುವುದು ಹೆಮ್ಮೆಯ ವಿಷಯ ವಾಗಿದೆ ಎಂದು ಹೇಳಿದರು.
ಈ ಅನುದಾನದಲ್ಲಿ ಒಟ್ಟು 99,287 ಕಾಮಗಾರಿಗಳನ್ನ ಪ್ರಾರಂಭಿಸಲಾಗಿದ್ದು, ಅದರಲ್ಲಿ 68,474 ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. ಇನ್ನುಳಿದ 30,813 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಮರಿಯಮ್ಮನ ಹಳ್ಳಿ ಪಟ್ಟಣಕ್ಕೆ ಸುಮಾರು 77 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಸದ್ಯದಲ್ಲೇ ಯೋಜನೆಯ ಅನುಷ್ಠಾನ ಪ್ರಾರಂಭಗೊಳ್ಳಲಿದೆ. ಇದರಿಂದ ಪಟ್ಟಣದ 11 ಸಾವಿರ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ ಎಂದರು. ಮುಂದಿನ ದಿನಗಳಲ್ಲಿ ಡಬಲ್ ಇಂಜಿನ್ ಸರಕಾರಗಳು ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರೀಬಿ ಹಠಾವೋ ಕಾಂಗ್ರೆಸ್ ಘೋಷಣೆ ಸಾಕರಗೊಳಿಸಿದ್ದರೆ ಇಂದು ಜನರ ಮನೆ ಬಾಗಿಲಿಗೆ ತೆರಳಿ ಗ್ಯಾರಂಟಿ ಚೀಟಿ ಕೊಡುವ ಪರಿಸ್ಥಿತಿ ಎದುರಾಗುತ್ತಿದ್ದಿಲ್ಲ. ಕಾಂಗ್ರೆಸ್ ಆಡಳಿತವಿದ್ದಾಗ ಫಲಾನುಭವಿಗಳಿಗಿಂತ ಮಧ್ಯವರ್ತಿಗಳಿಗೆ ಹೆಚ್ಚು ಪಾಲು ತಲುಪುತ್ತಿತ್ತು. ನರೇಂದ್ರ ಮೋದಿಯವರ ದೂರದೃಷ್ಟಿ ಯೋಜನೆಗಳಿಂದ ದೇಶದ ಜನತೆಗೆ ನೇರವಾಗಿ ಹಣ ಸಂದಾಯವಾಗುತ್ತಿದೆ. ಕರೋನಾ ಸಂದರ್ಭದಲ್ಲಿ 40 ಲಕ್ಷ ಜನ ಸಾಯ್ತಾರೆ ಅಂದಿದ್ರು, ಮೋದೀಜಿಯವರ ಸಮಯಪ್ರಜ್ಞೆಯಿಂದ ಲಸಿಕೆ ಘೋಷಣೆ ಮಾಡಿ, ಕೋಟ್ಯಾಂತರ ಜನರಿಗೆ ಲಸಿಕೆ ಹಾಕಿಸಿದ್ದರಿಂದ ದೇಶದ ಜನ ಆರೋಗ್ಯವಾಗಿದ್ದಾರೆ ಎಂದರು.
ಸಚಿವರಾದ ಆನಂದ್ ಸಿಂಗ್ ಅಧ್ಯಕ್ಷತೆವಹಿಸಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ 370 ಜಾರಿಗೊಳಿಸಿದರೆ ಬಾಂಬ್ ಬೀಳುತ್ತವೆ ಎಂದಿದ್ದರು. ಮೋದಿಜೀಯವರ ಯೋಜನಬದ್ಧ ಕಾರ್ಯವೈಖರಿಯಿಂದಾಗಿ ಪಠಾಕಿಯೂ ರುಸ್ ಎನ್ನಲಿಲ್ಲ. ಇಂದು ಕಾಶ್ವೀರಕ್ಕೆ ಯಾವುದೇ ಭಯವಿಲ್ಲದೆ ಹೋಗಿಬರಬಹುದು. ವಿಜಯನಗರ ಜಿಲ್ಲೆಯ ಅಭಿವೃದ್ಧಿ ಕ್ಷೇತ್ರದ ಜನರ ಕೈಯಲ್ಲಿದೆ ಎಂದರು.
ಸಚಿವ ಹಾಲಪ್ಪ ಆಚಾರ್, ಸಂಸದ ವೈ.ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ, ಹೇಮಲತಾ ನಾಯಕ್, ಹಾಗೂ ಜಿಲ್ಲಾಧಿಕಾರಿ ವೆಂಕಟೇಶ.ಟಿ, ಸಿಇಒ ಬಿ.ಸದಾಶಿವ ಪ್ರಭು, ಎಸ್ಪಿ ಶ್ರೀಹರಿಬಾಬು ಬಿ.ಎಲ್, ಅಪರ ಜಿಲ್ಲಾಧಿಕಾರಿ ಅನುರಾಧ.ಜಿ., ಎಸಿ ಸಿದ್ದರಾಮೇಶ್ವರ, ಟಿ.ವಿ.ಪ್ರಕಾಶ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ ಜೀರೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ